ಚಿಕ್ಕಬಳ್ಳಾಪುರ: ಹಗಲು, ರಾತ್ರಿ ಕೊರೊನಾ ಸಂಕಷ್ಟ ಕಾಲದಲ್ಲಿ ಕಷ್ಟಪಟ್ಟು ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಯುವಕನೊರ್ವ ಚಿನ್ನದ ಉಡುಗೊರೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚನಬಲೆ ಗ್ರಾಮದ ಸದಾಶಿವ್ ಆಶಾಕಾರ್ಯಕತೆಯರಿಗೆ ಬಾಗಿನ ಅರ್ಪಿಸಿ ಚಿನ್ನದ ಮೂಗುತಿಯನ್ನ ಉಡುಗೊರೆಯಾಗಿ ನೀಡಿದ್ದಾರೆ. ದಿಬ್ಬೂರು ಪ್ರಾಥಮಿಕ ಅರೋಗ್ಯ ಕೇಂದ್ರ ವ್ಯಾಪ್ತಿಯ 24 ಮಂದಿ ಆಶಾ ಕಾರ್ಯಕರ್ತೆಯರಿಗೆ ಚಿನ್ನದ ಮೂಗುತಿ, ಸೀರೆ, ಬಳೆ ಅರಿಶಿನ-ಕುಂಕುಮ ಹಾಗೂ ದಿನಸಿ ಪದಾರ್ಥಗಳ ಕಿಟ್ ನೀಡಿ ಗೌರವಿಸುವ ಮೂಲಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.
ನಾನು ಆರ್ಥಿಕವಾಗಿ ತುಂಬಾ ಸಿರಿವಂತ, ಸ್ಥಿತಿವಂತನಲ್ಲದಿದ್ರೂ ಕೊರೊನಾ ಸಂಕಷ್ಟದ ಸಮಯದಲ್ಲಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಗೌರವ ಸಲ್ಲಿಸುವುದು ನಮ್ಮ ಹೊಣೆ, ಜವಾಬ್ದಾರಿ ಕರ್ತವ್ಯ ಹೀಗಾಗಿ ತನ್ನ ಕೈಲಾದ ಸೇವೆಯನ್ನ ಮಾಡುತ್ತಿದ್ದೆನೆ. ಈ ಹಿಂದೆ ಸಹ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್, ಬಸ್ ಪಾಸ್ ಕೊಡುತ್ತಿದ್ದೆ. ಕೊರೊನಾ ಬಂದ ನಂತರ ಕಳೆದ ಬಾರಿ ಪುಡ್ ಕಿಟ್ ಕೊಟ್ಟಿದ್ದೆ, ಈ ಬಾರಿ ಬಾಗಿನ ಅರ್ಪಿಸುತ್ತಿದ್ದೇನೆ ಅಂತ ಹೇಳಿದ್ದಾರೆ.