ಬೆಂಗಳೂರು: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣರವರು ಬುಧವಾರ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ವಿವಿಧೆಡೆ ಸಂಚರಿಸಿ, ಕೋವಿಡ್ ಪರಿಸ್ಥಿತಿ ಹಾಗೂ ಮುಂಚೂಣಿ ಕಾರ್ಯಕರ್ತರ ಲಸಿಕೆ ಅಭಿಯಾನವನ್ನು ಪರಿಶೀಲನೆ ನಡೆಸಿದರು.
ಬೆಳಿಗ್ಗೆಯಿಂದಲೇ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ಕೈಗೊಂಡ ಡಿಸಿಎಂ, ಮುಖ್ಯವಾಗಿ ಕ್ಷೇತ್ರದಲ್ಲಿನ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು. ಸೋಂಕಿನ ಕಾರಣದಿಂದ ದೂರದಿಂದಲೇ ಜನರು ತಮ್ಮ ಅಹವಾಲು ಹೇಳಿಕೊಂಡರು.
ಜೊತೆಗೆ, ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತೆಯ ಗುಂಪಿಗೆ ನಡೆಯುತ್ತಿರುವ ಲಸಿಕೆ ಆಭಿಯಾನವನ್ನೂ ವೀಕ್ಷಿಸಿದರಲ್ಲದೆ ಇದಕ್ಕೆ ಇನ್ನೂ ವೇಗ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಪ್ಯಾಲೇಸ್ ಗುಟ್ಟಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದರು. ಜೊತೆಗೆ, ಗುಟ್ಟಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಅದರ ಪಕ್ಕದಲ್ಲೇ ಇರುವ ಕೋವಿಡ್ ಕೇರ್ ಕೇಂದ್ರಕ್ಕೂ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು.
ಮಲ್ಲೇಶ್ವರದ 19ನೇ ಅಡ್ಡರಸ್ತೆಯ ಕಾಶಿಮಠದಲ್ಲಿ ಆದ್ಯತಾ ಗುಂಪಿನಡಿ ವಿಕಲಚೇತನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಅಲ್ಲಿನ ವ್ಯವಸ್ಥೆಯನ್ನು ಡಿಸಿಎಂ ವೀಕ್ಷಿಸಿದರು. ಅಲ್ಲದೆ, ವ್ಯಾಕ್ಸಿನ್ ಕೊಟ್ಟ ನಂತರವೂ ಆರೋಗ್ಯದ ಮೇಲೆ ನಿಗಾ ಇಡುವಂತೆ ಆರೋಗ್ಯ ಸಿಬ್ಬಂದಿಗೆ ಸೂಚನೆ ಕೊಟ್ಟರು. ಇದೇ ವೇಳೆ ಮಲ್ಲೇಶ್ವರದ 13ನೇ ಅಡ್ಡರಸ್ತೆಯ ರೋಟರಿ ಜಾಗಕ್ಕೂ ಡಿಸಿಎಂ ಭೇಟಿ ನೀಡಿದ್ದರು. ಇದರ ನಡುವೆ ಮಲ್ಲೇಶ್ವರದ 13ನೇ ಅಡ್ಡರಸ್ತೆಯ ಪಬ್ಲಿಕ್ ಶಾಲೆ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು, ಅದರ ಪ್ರಗತಿಯನ್ನು ವೀಕ್ಷಿಸಿದರು. ನಿಗದಿತ ಕಾಲಕ್ಕೆ ಕಾಮಗಾರಿ ಮುಗಿಯಬೇಕು ಎಂದು ಸಂಬಂಧಿತ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಡಿಸಿಎಂ ಸೂಚನೆ ಕೊಟ್ಟರು.
ಇನ್ನೊಂದೆಡೆ ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ರೋಗ ಲಕ್ಷಣ ಇರುವ ಸೋಂಕಿತರನ್ನು ಪತ್ತೆ ಮಾಡುತ್ತಿದ್ದಾರೆ. ಅಗತ್ಯ ಇರುವವರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆ ಉತ್ತಮವಾಗಿದೆ ಎಂದು ತಿಳಿಸಿದರು.