ಹಾಸನ: ಆದಷ್ಟು ಬೇಗ ಕೊರೊನಾ ಇಲ್ಲದಂತಾಗಲಿ ಎಂದು ತಾಯಿ ಚಾಮುಂಡೇಶ್ವರಿ ಬಳಿ ಪ್ರಾರ್ಥಿಸಲಾಗಿದೆ ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ತಿಳಿಸಿದರು.
ಗುರುವಾರ ಸಂಜೆ ನಗರದ ಅಧಿದೇವತೆ ಹಾಸನಾಂಬೆ ದೇವಾಲಯಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಷ್ಟು ಬೇಗ ಕೊರೊನಾ ಜಗತ್ತಿನಿಂದ ಇಲ್ಲದಂತಾಗಲಿ ಎಂದು ಪ್ರಾರ್ಥಿಸಲಾಗಿದೆ. ಪ್ರತಿ ವರ್ಷ ಸಾರ್ವಜನಿಕರು ಹಾಸನಾಂಬೆ ದೇವಿ ದರ್ಶನ ಪೆಡಯುತ್ತಿದ್ದರು. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಜಿಲ್ಲಾಡಳಿತ ನಿರ್ಬಂಧ ಏರಿರುವುದರಿಂದ ಭಕ್ತರಿಗೆ ಅವಕಾಶ ನೀಡಿಲ್ಲ. ನೇರ ದರ್ಶನದಿಂದ ಭಕ್ತರು ವಂಚಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಭಕ್ತರಿಗೆ ಹಾಸನಾಂಬೆದೇವಿ ದರ್ಶನ ಮಾಡಲು ಕೊನೇಯ ದಿನ ಅವಕಾಶ ನೀಡುವ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿ ತೀರ್ಮಾನಿಸಲಾಗುವುದು ಎಂದರು.
ಇಷ್ಟು ದಿನ ಶಾಂತ ರೀತಿ ಜನತೆ ಸಹಕಾರ ಕೊಟ್ಟಿದ್ದಾರೆ. ತಾಯಿ ಕೃಪೆಯಿಂದ ಆದಷ್ಟು ಬೇಗ ಕೊರೊನಾದಿಂದ ದೂರ ಮಾಡಿ ಜನತೆ ಸುರಕ್ಷತೆಯಿಂದ ಇರಬೇಕು ಎಂದು ಮತ್ತೊಮ್ಮೆ ದೇವರಲ್ಲಿ ಪ್ರಾರ್ಥಿಸಿತ್ತೇನೆ. ಮುಖ್ಯಮಂತ್ರಿಗಳು ಹಾಸನಾಂಬೆ ದೇವಸ್ಥಾನಕ್ಕೆ ಬರುವಂತೆ ಪ್ರಾರಂಭದಲ್ಲೆ ಕೇಳಿದ್ದೆವು. ಬಾಗಿಲು ಹಾಕುವ ದಿವಸ ಬರುವಂತೆ ಮತ್ತೊಮ್ಮೆ ಮನವಿ ಮಾಡಲಾಗುವುದು ಎಂದರು.
ಹಾಸನಾಂಬೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದರ್ಬಾರ್ ಗಣಪತಿ ದೇವಸ್ಥಾನ ಹಾಗೂ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನಿಸಿದರು. ಈ ವೇಳೆ ಶಾಸಕ ಪ್ರೀತಮ್ ಜೆ. ಗೌಡ ಇದ್ದರು.