ಶಿವಮೊಗ್ಗ: ಮನೆಯ ಆವರಣದಲ್ಲಿದ್ದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದ ಪರಿಣಾಮ ನಿವೃತ್ತ ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಶಿವಮೊಗ್ಗದ ವೆಂಕಟೇಶ್ವರ ನಗರದಲ್ಲಿ ನಡೆದಿದೆ. ಮೃತರನ್ನು ನೀಲಮ್ಮ (73) ಎಂದು ಗುರುತಿಸಲಾಗಿದೆ.
ತೆರೆದ ಬಾವಿಯಿಂದ ನೀರೆತ್ತುವ ಮೋಟಾರ್ ಪಂಪ್ ದುರಸ್ತಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮೆಕ್ಯಾನಿಕ್ ನಿನ್ನೆ ಮನೆಗೆ ಭೇಟಿ ನೀಡಿ ರಿಪೇರಿ ಮಾಡಿ ತೆರಳಿದ್ದರು. ಶುಕ್ರವಾರ ಮುಂಜಾನೆ ಬಾವಿಗೆ ಅಳವಡಿಸಿದ್ದ ಗ್ರಿಲ್ ತೆಗೆದು ಮೋಟಾರ್ ಸರಿ ಹೋಗಿದೆಯೋ ಅಥವಾ ಇಲ್ಲವೋ ಎಂದು ಬಗ್ಗಿ ನೋಡಲು ಮುಂದಾಗಿದ್ದಾರೆ ಈ ವೇಳೆ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿದೆ.
ಮುಂಜಾನೆ ನೀಲಮ್ಮ ಮನೆಯಲ್ಲಿ ಕಾಣಿಸದಿದ್ದಾಗ ಮನೆಯವರು ಗಾಬರಿಯಾಗಿದ್ದಾರೆ. ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ನೀಲಮ್ಮ ಎಲ್ಲೂ ಪತ್ತೆಯಾಗಿಲ್ಲ. ನಂತರ ಬಾವಿಯ ಬಳಿ ಮೃತ ನೀಲಮ್ಮನ ಚಪ್ಪಲಿ ಇದ್ದಿದ್ದನ್ನು ಗಮನಿಸಿ ಅನುಮಾನಗೊಂಡು ಬಾವಿಯ ಒಳಗೆ ನೋಡಿದ್ದಾರೆ. ಈ ವೇಳೆ ಬಾವಿಯಲ್ಲಿ ನೀಲಮ್ಮ ಶವ ತೇಲುತ್ತಿದ್ದದ್ದು ಪತ್ತೆಯಾಗಿದೆ. ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಹೊರಗೆ ತೆಗೆದಿದ್ದಾರೆ.
ಘಟನೆ ಕುರಿತು ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡಿಆರ್ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ