ಕಿಚ್ಚನ ವೀಕೆಂಡ್ ಪಂಚಾಯಿತಿ ನಡೆಯದ ಹಿನ್ನೆಲೆ ವೀಕ್ಷಕರಿಗೆ ಮಾತ್ರವಲ್ಲ ಸ್ಪರ್ಧಿಗಳಿಗೂ ತುಂಬಾ ಬೇಸರವಾಗಿದೆ. ಅಲ್ಲದೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಸಹ. ಆದರೆ ಇದ್ದಕ್ಕಿದ್ದಂತೆ ಸುದೀಪ್ ಅವರ ಅಶರಿರವಾಣಿ ಕೇಳಿಸಿದ್ದು, ಸ್ಪರ್ಧಿಗಳ ಒಳ್ಳೆಯ ಗುಣ ಹಾಗೂ ಸರಿಪಡಿಸಿಕೊಳ್ಳಬೇಕಾದ ವೀಕ್ನೆಸ್ಗಳನ್ನು ಕಿಚ್ಚ ತಿಳಿಸಿದ್ದಾರೆ. ಈ ಮೂಲಕ ಸರ್ಪೈಸ್ ಜೊತೆಗೆ ಶಾಕ್ ನೀಡಿದ್ದಾರೆ.
ಅನಾರೋಗ್ಯದ ಕಾರಣ ಕಳೆದ ಮೂರು ವಾರಗಳಿಂದ ಕಿಚ್ಚ ವಾರದ ಪಂಚಾಯಿತಿಗೆ ಆಗಮಿಸಿಲ್ಲ. ಹೀಗಾಗಿ ವೀಕ್ಷಕರು ಭಾರೀ ಬೇಸರಗೊಂಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಸ್ಪರ್ಧಿಗಳೂ ಸಹ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಂದು ಇದ್ದಕ್ಕಿದ್ದಂತೆ ಅವರ ಅಶರೀರ ವಾಣಿ ಕೇಳಿಸಿದ್ದು, ಸ್ಪರ್ಧಿಗಳಿಗೆ ತಮ್ಮದೇಯಾದ ಉತ್ತಮ ಗುಣ ಹಾಗೂ ಅವರ ವೀಕ್ನೆಸ್ ಹೇಳಿದ್ದಾರೆ. ಈ ಮೂಲಕ ಎಚ್ಚರಿಸಿದ್ದಾರೆ. ಒಂದೆಡೆ ಸುದೀಪ್ ಅವರ ವಾಯ್ಸ್ ಕೇಳಿ ಖುಷಿಪಟ್ಟ ಸ್ಪರ್ಧಿಗಳು, ಅವರ ಮಾತು ಕೇಳಿ ಶಾಕ್ ಸಹ ಆಗಿದ್ದಾರೆ.
ವೈಷ್ಣವಿ ಅವರ ಬಗ್ಗೆ ಮಾತನಾಡುವ ಮೂಲಕ ಆರಂಭಿಸಿದ ಕಿಚ್ಚ, ಕೊನೆಗೆ ದಿವ್ಯಾ ಉರುಡುಗ ಬಗ್ಗೆ ಮಾತನಾಡುವ ಮೂಲಕ ಕೊನೆಗೊಳಿಸಿದ್ದಾರೆ. ಕೊನೆಗೆ ಸ್ಪರ್ಧಿಗಳು ಸಹ ತಾವು ಸುದೀಪ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿದ್ದಾರೆ.
ಹೀಟೆಡ್ ಚರ್ಚೆ ನಡೆಯುವಾಗ ಒಳಗಿರುವುದನ್ನು ಆಚೆ ಹಾಕಿ, ಇಲ್ಲವಾದಲ್ಲಿ ಇದೆಲ್ಲ ಹೆಪ್ಪುಗಟ್ಟಿ ಸರ್ಜರಿ ಮಾಡಬೇಕಾಗುತ್ತದೆ ಎಂದು ವೈಷ್ಣವಿಗೆ ಹೇಳಿದರೆ, ಸ್ವಲ್ಪ ಬುದ್ಧಿ ಹೆಚ್ಚಾದರೂ ಲೈಫ್ ದಾರಿ ತಪ್ಪಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕಿವಿಮಾತು ಹೇಳಿದ್ದಾರೆ. ಮಂಜು ಜೊತೆ ಬಿಟ್ರೆ ನೀವೆಲ್ಲೂ ಕಾಣಿಸುತ್ತಿಲ್ಲ ಎಂದು ದಿವ್ಯಾ ಸುರೇಶ್ಗೆ ತಿವಿದಿದ್ದಾರೆ.
ಅಲ್ಲದೆ ಶಮಂತ್ ಅವರಿಗೆ ಇನ್ನೂ ಟಾಪ್ ಗೇರ್ ಗೆ ಬರಬೇಕಿದೆ ಎಂದು ತಿಳಿಸಿದರೆ, ಮಂಜುಗೆ ನೀವು ಎಂಟರ್ಟೈನರ್ ಆಗಿ ಒಳಗೆ ಹೋಗಿದ್ದೀರಿ ಎಂದು ನೆನಪಿಸಿದ್ದಾರೆ. ಅಳೋ ಮಗುಗೆ ಹಾಲು ಜಾಸ್ತಿ ಸಿಗುತ್ತೆ, ಹಾಗಂತ ಅಳೋದು ಜಾಸ್ತಿ ಆದರೆ, ನೋಡುವವರಿಗೆ ಎರಡು ತಟ್ಟೋಣ ಅನ್ಸುತ್ತೆ ಎಂದು ಹೇಳುವ ಮೂಲಕ ಪ್ರಶಾಂತ್ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ಚಾಟಿ ಬೀಸಿದ್ದಾರೆ. ಇದಕ್ಕೆ ಉತ್ತರಿಸಿರುವ ಪ್ರಶಾಂತ್ ಸಂಬರಗಿ ಜಾಸ್ತಿ ಮಾಡಿಲ್ಲ ಸರ್, ಜಾಸ್ತಿ ಆಗಿದ್ರೆ ಸರಿಪಡಿಸಿಕೊಳ್ಳುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನಿಮ್ಮ ಗ್ರಾಫ್ ಚೆನ್ನಾಗಿದೆ, ಕಾನ್ಫಿಡೆನ್ಸ್ ಜಾಸ್ತಿ ಆಗ್ತಾ ಇನೋಸೆನ್ಸ್ ಕಡಿಮೆ ಆಗಬಹುದು ಎಂಬುದು ನೆನಪಿನಲ್ಲಿರಲಿ ಎಂದು ಅರವಿಂದ್ಗೆ ತಿವಿದ್ದಾರೆ. ಆಟದ ಮೇಲೆ ಹೆಚ್ಚು ಗಮನವಿರಲಿ ಎಂದು ದಿವ್ಯಾ ಉರುಡುಗ ಅವರನ್ನು ಎಚ್ಚರಿಸಿದ್ದಾರೆ. ಕೊನೆಯದಾಗಿ ಎಲ್ಲ ಸ್ಪರ್ಧಿಗಳಿಗೆ ತಿವಿದಿದ್ದು, ಕೆಲವರಿಗೆ ಕೆಲವೆಡೆ ಗಮನ ಹೆಚ್ಚಾಗಿ, ಕೆಲವದರ ಮೇಲೆ ಗಮನ ಕಡಿಮೆಯಾಗುತ್ತಿದೆ. ಕೆಲವರಿಗೆ ಹೋಗಿರುವ ಉದ್ದೇಶವೇ ಮರೆತು ಹೋಗಿ, ಉಳಿದಿದ್ದರ ಮೇಲೆ ಗಮನ ಹೆಚ್ಚಾಗುತ್ತಿದೆ ಎಂದಿದ್ದಾರೆ. ಕೊನೆಗೆ ನಿಮ್ಮೆಲ್ಲರನ್ನು ನೋಡುವ ಆಸೆ ನನಗೂ ಇದೆ ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿದ್ದಾರೆ.
ಲವ್ ಯೂ ಟೂ ಸುದೀಪ್ ಸರ್, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆವು. ನಿಮ್ಮ ಆರೋಗ್ಯ ಚೆನ್ನಾಗಿದೆ ಎಂದು ಗೊತ್ತಾಗಿ ಜೀವ ಬಂದಂಗಾಗಿದೆ, ನಿಮ್ಮ ಧ್ವನಿ ಕೇಳಿ ಹೊಸ ಶಕ್ತಿ ಬಂದಹಾಗಾಗಿದೆ. ನಿಮಗೋಸ್ಕರ 12 ಮಕ್ಕಳು ಕಾಯುತ್ತಿದ್ದೇವೆ ಬೇಗ ಬನ್ನಿ ಎಂದು ಸ್ಪರ್ಧಿಗಳಲೆಲ್ಲರೂ ಕೇಳಿಕೊಂಡಿದ್ದಾರೆ.