ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಡಿ.ಕ್ರಾಸ್ ರಸ್ತೆಯ ಪ್ರಸಿದ್ದ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಹುಂಡಿಗಳಲ್ಲಿದ್ದ ಹಣ ಕಳ್ಳತನ ಮಾಡಲಾಗಿದೆ.
ದೇವಾಲಯದ ಗೇಟ್ ಹಾಗೂ ಮುಖ್ಯ ದ್ವಾರದ ಬಾಗಿಲಿಗೆ ಹಾಕಿರುವ ಬೀಗಗಳನ್ನು ಹೊಡೆದು ಒಳ ನುಗ್ಗಿರುವ ಕಳ್ಳರು, ದೇವಾಲಯದಲ್ಲಿದ್ದ ಮೂರು ಹುಂಡಿಗಳನ್ನು ತೆರೆಯಲು ಪ್ರಯತ್ನಿಸಿ ವಿಫಲರಾಗಿ ನಂತರ ಹುಂಡಿಗಳನ್ನು ದೇವಾಲಯದ ಎದುರಿನಲ್ಲಿರುವ ನಾಗರಕರೆಯ ಅಂಗಳಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ ಹುಂಡಿಗಳನ್ನು ಜಜ್ಜಿ, ಹುಂಡಿಯಲ್ಲಿದ್ದ ಹಣವನ್ನು ಕಳವು ಮಾಡಿ ಹುಂಡಿಗಳನ್ನು ಅಲ್ಲೇ ಬಿಸಾಡಿ, ಪರಾರಿಯಾಗಿದ್ದಾರೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ಇರಲ್ಲ, ಸಭೆ ಸಮಾರಂಭಕ್ಕೆ ಅವಕಾಶವಿಲ್ಲ – ಲಾಕ್ಡೌನ್ ಇನ್ನಷ್ಟು ಸಡಿಲ
ದೇವಾಲಯದ ಸಿಬ್ಬಂದಿ ಬಾಗಿಲು ತೆರೆಯಲು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಆದರೆ ಲಾಕ್ಡೌನ್ ಹಿನ್ನಲೆಯಲ್ಲಿ ಇತ್ತೀಚೆಗೆ ದೇವಾಲಯಕ್ಕೆ ಭಕ್ತರ ಆಗಮನ ಕಡಿಮೆ ಇದ್ದುದರಿಂದ ಹುಂಡಿಯಲ್ಲಿ ಹೆಚ್ಚಿನ ಹಣ ಇರಲಿಲ್ಲ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಲಾಕ್ಡೌನ್ ತೆರವಾದ ನಂತರ ತಾಲೂಕಿನಲ್ಲಿ ಕಳ್ಳತನಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ಮುಖ್ಯ ರಸ್ತೆಗಳ ದೇವಾಲಯಗಳಲ್ಲಿಯೇ ಹೀಗಾದರೆ ಹೊರವಲಯದಲ್ಲಿರುವ ಮನೆಗಳಿಗೆ ಹಾಗೂ ದೇವಾಲಯಗಳಿಗೆ ರಕ್ಷಣೆ ಹೇಗೆ ಎನ್ನುವ ಆತಂಕ ನಾಗರೀಕರಲ್ಲಿ ಎದುರಾಗಿದ್ದು, ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.