– ಇಂದು ಸಿಎಂಗೆ ಸಿಗೋದು ಸಿಹಿಯೋ? ಕಹಿಯೋ?
ಬೆಂಗಳೂರು: ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಎರಡನೇ ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಿಹಿ ಸುದ್ದಿ ಸಿಗುತ್ತಾ ಅಥವಾ ಕಹಿ ಸುದ್ದಿ ಸಿಗುತ್ತಾ ಅನ್ನೋ ಟೆನ್ಷನ್ ಕಮಲ ಪಡಸಾಲೆಯಲ್ಲಿ ಹೆಚ್ಚಾಗಿದೆ.
ಶನಿವಾರ ಮಾತನಾಡಿದ್ದ ಅಮಿತ್ ಶಾ, ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಹೊಗಳಿ ಬಹುಪರಾಕ್ ಹೇಳಿದ್ದರು. ಮುಂದಿನ ಎರಡೂವರೆ ವರ್ಷ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಲಿದೆ ಎಂದು ಮಾತ್ರ ಹೇಳಿದ್ದರು. ಆದ್ರೆ ಮುಂದಿನ ಎರಡೂವರೆ ವರ್ಷ ಯುಡಿಯೂರಪ್ಪ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂಬುದರ ಬಗ್ಗೆ ಶಾ ಎಲ್ಲಿಯೂ ಹೇಳಿರಲಿಲ್ಲ. ಹಾಗಾಗಿ ಬೆಳಗಾವಿ ಪಕ್ಷದ ಸಮಾವೇಶದಲ್ಲಿ ಯಡಿಯೂರಪ್ಪ ಕುರ್ಚಿಗೆ ಇರುವ ಪೂರ್ಣಾವಧಿ ಅನಿಶ್ಚಿತತೆಗೆ ಉತ್ತರ ಸಿಗುತ್ತಾ ಅಂತ ಕಮಲ ನಾಯಕರು ಕಾಯುತ್ತಿದ್ದಾರೆ.
ಸಂಪುಟ ವಿಸ್ತರಣೆ ವೇಳೆಯಲ್ಲಿ ಮಾರ್ಚ್ ನಂತರ ಸಿಎಂ ಕುರ್ಚಿಗೆ ಕ್ರಾಂತಿ ಆಗಲಿದೆ ಎಂಬ ಮಾತುಗಳಿಗೆ ಮತ್ತೆ ಜೀವ ಬಂದಿದೆ. ಬಜೆಟ್ ಮಂಡನೆ ನಂತತ ಅಂದ್ರೆ ಮಾರ್ಚ್ ಅಂತ್ಯದಲ್ಲಿ ಸಿಎಂ ಸ್ಥಾನಕ್ಕೆ ಬೇರೊಬ್ಬರು ಬರಲಿದ್ದಾರೆ ಅನ್ನೋ ಚರ್ಚೆಗಳು ಆರಂಭಗೊಂಡಿವೆ. ಆದ್ರೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತ್ರ ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪನವರೇ ಸಿಎಂ ಸ್ಥಾನದಲ್ಲಿರಲಿದ್ದಾರೆ ಎಂದು ಹೇಳಿದ್ದರು. ಆದ್ರೆ ಅಮಿತ್ ಶಾ ಮಾತ್ರ ಬಹಿರಂಗವಾಗಿ ಈ ಮಾತುಗಳನ್ನ ಹೇಳದ ಕಾರಣ ಹರಿದಾಡುತ್ತಿರುವ ಅಂತೆ ಕಂತೆಗಳು ಸತ್ಯಕ್ಕೆ ಹತ್ತಿರವಾದವು ಅನ್ನೋ ಸಣ್ಣ ಅನುಮಾನ ಕೇಸರಿ ನಾಯಕರ ಮನದಲ್ಲಿ ಮನೆ ಮಾಡಿದೆ.