-ಮಾರಕಾಸ್ತ್ರಗಳಿಂದ ಹಲ್ಲೆಗೈದು ಅರಣ್ಯ ಪ್ರದೇಶದಲ್ಲಿ ಬಿಟ್ಟು ಹೋದ್ರು
-ದಾರಿಹೋಕನ ಸಮಯ ಪ್ರಜ್ಞೆಯಿಂದ ಬದುಕುಳಿದ ಯುವತಿ
ಲಕ್ನೋ: ಅನ್ಯ ಜಾತಿಯ ಯುವಕನನ್ನ ಪ್ರೀತಿಸಿದಕ್ಕೆ ಯುವತಿಯ ಕೊಲೆ ಯತ್ನ ನಡೆದಿರುವ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ. ಯುವತಿ ಪ್ರೀತಿಸಿದ ಯುವಕನನ್ನ ಮದುವೆಯಾಗಲು ಸಿದ್ಧತೆ ನಡೆಸಿದ ಹಿನ್ನೆಲೆ ಕೊಲೆ ಯತ್ನ ನಡೆದಿದೆ.
22 ವರ್ಷದ ಬಾಬಿ ಕುಟುಂಬಸ್ಥರಿಂದ ಹಲ್ಲೆಗೊಳಗಾದ ಯುವತಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸೋದರ ಅರುಣ್ ಮತ್ತು ಬಾವ ರಾಜು ಸೈನಿ ಇಬ್ಬರನ್ನು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಯುವತಿ ಮೀರತ್ ನಗರದ ಮಹ್ಮುದ್ ಗದಿ ಅರಣ್ಯ ಪ್ರದೇಶದ ರಸ್ತೆ ಬಳಿ ಅರೆ ಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಳು. ಯುವತಿಯನ್ನು ನೋಡಿದ ದಾರಿಹೋಕ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯುವತಿಗೆ ಮೀರತ್ ಮೆಡಿಕಲ್ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ದಾರಿಹೋಕನ ಸಮಯ ಪ್ರಜ್ಞೆಯಿಂದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸೋಮವಾರ ರಾತ್ರಿ ಅರುಣ್ ಮತ್ತು ರಾಜು ಯುವತಿಯನ್ನ ಕೊಂದು, ಶವವನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಲು ಪ್ಲಾನ್ ಮಾಡಿಕೊಂಡಿದ್ದರು. ಪ್ಲಾನ್ ಪ್ರಕಾರ ಸೋಮವಾರ ರಾತ್ರಿ ಬಾಬಿಗೆ ಸುಳ್ಳು ಹೇಳಿ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆ ತಂದಿದ್ದಾರೆ. ತಮ್ಮ ಜೊತೆ ತಂದಿದ್ದ ಹರಿತವಾದ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಯುವತಿ ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಬಾಬಿಯನ್ನು ಅಲ್ಲಿಯೇ ಬಿಟ್ಟು ಇಬ್ಬರು ಎಸ್ಕೇಪ್ ಆಗಿದ್ದಾರೆ ಎಂದು ಮೀರತ್ ಗ್ರಾಮೀಣ ಠಾಣೆಯ ಎಸ್.ಪಿ. ಅವಿನಾಶ್ ಪಾಂಡೆ ತಿಳಿಸಿದ್ದಾರೆ.
ಯುವತಿ ತನ್ನದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಕುಟುಂಬಸ್ಥರು ಯುವಕನೊಂದಿಗೆ ತಿರುಗಾಡದಂತೆ ಬಾಬಿಗೆ ಎಚ್ಚರಿಕೆ ನೀಡಿದ್ದರು. ಆದ್ರೆ ಯುವತಿ ಆತನೊಂದಿಗೆ ಮದುವೆ ಮಾಡಿಕೊಳ್ಳಲು ಮುಂದಾಗಿರುವ ವಿಷಯ ತಿಳಿದ ಕುಟುಂಬಸ್ಥರು ಕೊಲೆಗೆ ಸಂಚು ರೂಪಿಸಿದ್ದರು.