ಬಳ್ಳಾರಿ: ಹೋಂ ಐಸೊಲೇಷನ್ನಲ್ಲಿದ್ದ ಕೊರೊನಾ ಸೋಂಕಿತ ಹಸಿವಿನಿಂದ ಸಾವನ್ನಪ್ಪಿರುವ ದಾರುಣ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿಯ ಬಿ ಬೆಳಗಲ್ಲು ಗ್ರಾಮದಲ್ಲಿ ಈ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದ್ದು, ಮನೆಯಲ್ಲೇ ಪ್ರತ್ಯೇಕವಾಗಿದ್ದ ಕೊರೊನಾ ಸೋಂಕಿತ ವೃದ್ಧ ವ್ಯಕ್ತಿ ಊಟ ಸಿಗದೇ ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಬಳ್ಳಾರಿ ಜಿಲ್ಲಾಡಳಿತ ಆದೇಶ ನೀಡಿದೆ.
ಮೂಲಗಳ ಪ್ರಕಾರ ಬಳ್ಳಾರಿಯ ಟಿ ಬೆಳಗಲ್ಲು ಗ್ರಾಮದ ವೃದ್ಧ ವ್ಯಕ್ತಿಗೆ ಸೋಂಕು ತಗುಲಿರುವ ವಿಚಾರ ತಿಳಿಯುತ್ತಲೇ ಅವರನ್ನು ಕುಟುಂಬಸ್ಥರು ಮನೆಯಲ್ಲೇ ಬಿಟ್ಟು ಪ್ರತ್ಯೇಕವಾಗಿ ಹೊರಟು ಹೋಗಿದ್ದಾರೆ. ಮನೆಯಲ್ಲೇ ಇದ್ದ ಸೋಂಕಿತ ವೃದ್ಧ ಕೋವಿಡ್ ಸಹಾಯವಾಣಿಗೆ ನಿರಂತರವಾಗಿ ಕರೆ ಮಾಡಿದರೂ ಯಾವುದೇ ರೀತಿಯ ಪ್ರಯೋಜನವಾಗಿರಲಿಲ್ಲ.
ಹೀಗಾಗಿ ಅನ್ನ ನೀರು, ಸೂಕ್ತ ಚಿಕಿತ್ಸೆ ಸಿಗದೇ ವೃದ್ಧ ಮನೆಯಲ್ಲೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ. ಸದ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ತನಿಖೆಗೆ ಆದೇಶ ಮಾಡಿದ್ದಾರೆ.