ಬೆಂಗಳೂರು: ಹಬ್ಬದ ದಿನವೇ ಅಣ್ಣ ತಮ್ಮಂದಿರು ಮಾರಾಕಾಸ್ತ್ರಗಳಿಂದ ಬಡಿದಾಡಿಕೊಂಡಿದ್ದು, ಈ ಗಲಾಟೆಯಲ್ಲಿ ಅಣ್ಣ ಬರ್ಬರವಾಗಿ ಕೊಲೆಯಾಗಿರುವ ಘಟನೆ ಸಿಲಿಕಾನ್ ಸಿಟಿಯ ಶ್ರೀರಾಂಪುರದಲ್ಲಿ ನಡೆದಿದೆ.
ಕೊಲೆಯಾದ ಅಣ್ಣನನ್ನು ರವಿ (36) ಎಂದು ಗುರುತಿಸಲಾಗಿದೆ. ರವಿ ತಮ್ಮ ಆದಿಶಂಕರ್ ಅಣ್ಣನ ಎದೆಗೆ ಚಾಕು ಹಾಕಿ ಕೊಲೆ ಮಾಡಿದ್ದಾನೆ. ಅದಿಶಂಕರ್ ಎದೆ ಭಾಗಕ್ಕೆ ಚಾಕು ಹಾಕಿರುವ ಕಾರಣ ರವಿ ತೀವ್ರ ರಕ್ತಸಾವ್ರದಿಂದ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.
ಇಂದು ಹಬ್ಬವಾದರು ಕುಡಿದು ಬಂದಿದ್ದ ರವಿ ಕುಡಿದ ಅಮಲಿನಲ್ಲಿ ಪತ್ನಿ ರಾಧಿಕಾ ಜೊತೆ ಜಗಳವಾಡುತ್ತಿದ್ದ. ಈ ಜಗಳ ಬಿಡಿಸಲು ರವಿ ಕಿರಿಯ ಸಹೋದರರಾದ ಆದಿಶಂಕರ್ ಹಾಗೂ ಕಾರ್ತಿಕ್ ಮಧ್ಯ ಪ್ರವೇಶಿಸಿದ್ದಾರೆ. ಇದರಿಂದ ಕೋಪಗೊಂಡ ರವಿ ಸಹೋದರರ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಚಾಕು ಕಿತ್ತುಕೊಂಡ ಆದಿಶಂಕರ್ ಅಣ್ಣನ ಎದೆಗೆ ಇರಿದು ಕೊಲೆ ಮಾಡಿದ್ದಾನೆ.
ಈ ಸಂಬಂಧ ಸ್ಥಳಕ್ಕೆ ಶ್ರೀರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಆದಿಶಂಕರ್ ಅನ್ನು ವಶಕ್ಕೆ ಪಡೆದಿದ್ದಾರೆ. ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.