– ಕೊಲೆಯ ಬಳಿಕ ಪೊಲೀಸರಿಗೆ ಶರಣು
– ಪತಿಗೆ ಮೋಸ ಮಾಡಿ ಮೈದುನನ ಜೊತೆ ಕಳ್ಳ ಸಂಬಂಧ
ಭುವನೇಶ್ವರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಪ್ರೀತಿಸುತ್ತಿದ್ದ ಸಹೋದರ (ಚಿಕ್ಕಪ್ಪನ ಮಗ) ನನ್ನು ಬಾಣದ ಮೂಲಕ ಕೊಲೆ ಮಾಡಿರುವ ಘಟನೆ ಓಡಿಶಾದಲ್ಲಿ ನಡೆದಿದೆ.
ಈ ಘಟನೆ ಒಡಿಶಾದ ಕಿಯೊಂಜ್ಹಾರ ಜಿಲ್ಲೆಯ ಟೆಲ್ಕೊಯಿ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಜಿತು ಮುಂಡಾ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಶಂಕರ್ ಪೊಲೀಸರಿಗೆ ಶರಣಾಗಿದ್ದಾನೆ.
ಏನಿದು ಪ್ರಕರಣ?
ಶಂಕರ್ ಮುಂಡಾ ಸಂಬಂಧದಲ್ಲಿ ಮೃತ ಜಿತುಗೆ ಸಹೋದರ ಆಗಬೇಕು. ಆದರೆ ಮೃತ ಜಿತು ತನ್ನ ಸಹೋದರ ಶಂಕರ್ ಪತ್ನಿ ಅಂದರೆ ಅತ್ತಿಗೆಯನ್ನು ಪ್ರೀತಿಸುತ್ತಿದ್ದನು. ಅಲ್ಲದೇ ಆಕೆಯ ಜೊತೆ ಅನೈತಿಕ ಸಂಬಂಧ ಕೂಡ ಇಟ್ಟುಕೊಂಡಿದ್ದನು. ಈ ವಿಚಾರ ಶಂಕರ್ಗೆ ಗೊತ್ತಾಗಿದೆ. ಬಳಿಕ ಶಂಕರ್ ಮತ್ತೆ ಈ ರೀತಿ ಮಾಡದಂತೆ ಜಿತುಗೆ ಎಚ್ಚರಿಕೆ ನೀಡಿದ್ದಾನೆ.
ಎಚ್ಚರಿಕೆ ನೀಡಿದರೂ ಮೃತ ಜಿತು ಅತ್ತಿಗೆಯೊಂದಿಗೆ ಸಂಬಂಧವನ್ನು ಮುಂದುವರಿಸಿದ್ದನು. ಅಲ್ಲದೇ ಜಿತು 15 ದಿನಗಳ ಹಿಂದೆ ಅತ್ತಿಗೆಯನ್ನು ತನ್ನ ಹೆಂಡತಿಯಾಗಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ ಎಂದು ಮೂಲಗಳು ತಿಳಿಸಿವೆ. ಇದರಿಂದ ಕೋಪಗೊಂಡ ಶಂಕರ್ ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ.
ಅದರಂತೆಯೇ ಶುಕ್ರವಾರ ಜಿತು, ಆರೋಪಿ ಶಂಕರ್ ಸಹೋದರಿಯ ಮಗನ ಜೊತೆಗೆ ಶಂಕರ್ ಮನೆಯ ಮುಂದೆ ಟ್ರ್ಯಾಕ್ಟರ್ ನಿಲ್ಲಿಸಲು ಹೋಗಿದ್ದಾನೆ. ಆಗ ಶಂಕರ್ ತನ್ನ ಬಿಲ್ಲು ಮತ್ತು ಬಾಣದಿಂದ ಜಿತುವಿನ ಎದೆಗೆ ಬಾಣ ಬಿಟ್ಟಿದ್ದಾನೆ. ಪರಿಣಾಮ ಜಿತು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಆರೋಪಿ ಶಂಕರ್ ಕೊಲೆ ಮಾಡಿದ ನಂತರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.