ಮುಂಬೈ: ಬಿಜೆಪಿ ನಾಯಕರ ಮಾತುಕತೆಯ ನಂತರ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿದಿರುವ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ನಡೆಯನ್ನ ಶಿವಸೇನೆ ಪ್ರಶ್ನೆ ಮಾಡಿದೆ. ಶಿವಸೇನೆ ಮುಖವಾಣಿಯ ಸಂಪಾದಕೀಯದಲ್ಲಿ ಅಣ್ಣಾ, ನೀವು ಯಾರ ಪರ? ಶೀರ್ಷಿಕೆಯಡಿಯಲ್ಲಿ ಲೇಖನ ಪ್ರಕಟಿಸಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಅಣ್ಣಾ ಹಜಾರೆ ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸೋದಾಗಿ ಹೇಳಿದ್ದರು. ಧರಣಿಗಾಗಿ ವೇದಿಕೆಯನ್ನ ಸಹ ಸಿದ್ಧಪಡಿಸಲಾಗಿತ್ತು. ಶುಕ್ರವಾರ ಸಂಜೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಭೇಟಿ ಬಳಿಕ ಅಣ್ಣಾ ಹಜಾರೆ ಧರಣಿಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.
ಶಿವಸೇನೆ ಹೇಳಿದ್ದೇನು?: ಅಣ್ಣಾ ಹಜಾರೆ ಈ ಹಿಂದೆಯೂ ಹೋರಾಟದ ಅಸ್ತ್ರವನ್ನ ಹೊರಗೆ ತೆಗೆದು ನಂತರ ತೆರೆಗೆ ಸರೀಸಿದ್ದಾರೆ. ಹಾಗಾಗಿ ಅಣ್ಣಾ ಹಜಾರೆ ಅವರನ್ನ ಕಂಡವರಿಗೆ ಈ ನಿರ್ಧಾರ ಆಶ್ಚರ್ಯವನ್ನುಂಟು ಮಾಡಿರಲ್ಲ. ಬಿಜೆಪಿ ನಾಯಕರು ನೀಡಿರುವ ಆಶ್ವಾಸನೆಗಳು ಅಣ್ಣಾ ಹಜಾರೆ ಒಮ್ಮತಿಸಿದ್ರೆ ಅದು ಅವರ ಸಮಸ್ಯೆ. ರೈತವರ್ಗದ ನಾಶಕ್ಕೆ ನಾಂದಿಗೆ ಈ ಕೃಷಿ ಕಾನೂನುಗಳು ಕಾರಣವಾಗುತ್ತಿರೋದಕ್ಕೆ ಇಡೀ ದೇಶ ಆಕ್ರೋಶ ಹೊರ ಹಾಕುತ್ತಿದೆ. ಈ ಸಂದರ್ಭದಲ್ಲಿ ಅಣ್ಣಾ ಸಹ ರೈತರಿಗೆ ತಮ್ಮ ಪ್ರತಿಭಟನೆ ಮೂಲಕ ದೆಹಲಿ ಗಡಿಯಲ್ಲಿರುವ ಅನ್ನದಾತರಿಗೆ ಬೆಂಬಲ ನೀಡುತ್ತಾರೆ ಎಂದು ಹೇಳಲಾಗಿತ್ತು. ಆದ್ರೆ ಅಣ್ಣಾ ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಹಾಗಾಗಿ ನೂತನ ಕೃಷಿ ಕಾನೂನುಗಳ ಸಂಬಂಧ ಅಣ್ಣಾ ನಿಲುವು ಏನು ಎಂಬುವುದು ಅಸ್ಪಷ್ಟವಾಗಿಯೇ ಉಳಿದಿದೆ.
ಇದೇ ಸಂಪಾದಕೀಯದಲ್ಲಿ ರೈತರ ಆಂದೋಲನ ಕೇವಲ ರಾಜ್ಯಗಳಿಗೆ ಸೀಮಿತವಾಗಿರದೇ ದೇಶದ ವಿಷಯವಾಗಿದೆ. ಲಕ್ಷ ಲಕ್ಷ ರೈತರು ಕಳೆದ 30 ದಿನಗಳಿಂದಲೂ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಆದ್ರೆ ಸರ್ಕಾರ ಈ ಶಾಂತಿಯುತ ಪ್ರತಿಭಟನೆಯನ್ನ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಧರಣಿ ಸ್ಥಳದ ವಿದ್ಯುತ್-ನೀರು ಕಡಿತಗೊಳಿಸಿ ಅಮಾನವೀಯತೆಯನ್ನ ಮರೆಯುತ್ತಿದೆ. ರೈತರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಿ ಒತ್ತಡಕ್ಕೆ ಸಿಲುಕಿ ಪ್ರತಿಭಟನೆಯಿಂದ ಹಿಂದೆ ಸರಿಸುವ ಎಲ್ಲ ಪ್ರಯತ್ನಗಳನ್ನ ಕೇಂದ್ರ ಸರ್ಕಾರ ತೆರೆಮರೆಯಲ್ಲಿ ಮಾಡುತ್ತಿದೆ. ಈ ವಿಷಯದ ನಿಮ್ಮ ಅಭಿಪ್ರಯಾ ಏನು? ನಿಜವಾಗಲೂ ನೀವು ಯಾರ ಪರ ಅಣ್ಣಾ ಎಂದು ಶಿವಸೇನೆ ಕೇಳಿದೆ.
ಕಳೆದ ನಾಲ್ಕು ವರ್ಷಗಳಿಂದ ರೈತರ ಪ್ರಮುಖ ಬೇಡಿಕೆಗಳಿಗಾಗಿ ನಾನು ಹೋರಾಟ ನಡೆಸುತ್ತಿದ್ದೇನೆ. ಆದರೆ ಸರ್ಕಾರ ರೈತರ ಬಗ್ಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ರೈತರ ಸಮಸ್ಯೆ ಕುರಿತಾಗಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಅಣ್ಣಾ ಹಜಾರೆ ಅಸಮಾಧಾನ ವ್ಯಕ್ತಪಡಿಸಿ ನಾಳೆಯಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದರು.
ಮಹಾರಾಷ್ಟ್ರದ ಅಹ್ಮದ್ನಗರ್ ನಲ್ಲಿ ನಾಳೆಯಿಂದ ಉಪವಾಸ ಸತ್ಯಾಗ್ರಹ ನಡೆಸಲು ಎಲ್ಲಾ ತಯಾರಿ ನಡೆಸಿದ್ದ ಅಣ್ಣಾ ಹಜಾರೆ ಅವರನ್ನು ಇಂದು ಕೇಂದ್ರ ರಾಜ್ಯ ಖಾತೆ ಸಚಿವ ಕೈಲಾಸ್ ಚೌದರಿ ಮತ್ತು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿ ಉಪವಾಸ ಸತ್ಯಾಗ್ರಹ ಮಾಡದಂತೆ ಮನವಿ ಮಾಡಿಕೊಂಡಿದ್ದರು. ಈ ಮನವಿಗೆ ಒಪ್ಪಿಗೆ ಸೂಚಿಸಿರುವ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯಲು ಒಪ್ಪಿದ್ದಾರೆ ಎಂದು ವರದಿಯಾಗಿದೆ.