ವಿಜಯಪುರ: ಅಕ್ರಮವಾಗಿ ತಂಬಾಕು ಮಿಶ್ರಿತ ಮಾವಾ ತಯಾರಿಸುತ್ತಿದ್ದ ಶೆಡ್ ಮೇಲೆ ಚಡಚಣ ಪೊಲೀಸರು ದಾಳಿ ನಡೆಸಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.
ಈ ಸಂಬಂಧ 7 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ದಾಳಿ ವೇಳೆ 3.87.300 ಲಕ್ಷ ರೂ. ಮೌಲ್ಯದ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಚಡಚಣ ಪಟ್ಟಣದ ಹುಸೇನ್ ಸಾಬ್ ನದಾಫ್, ಗಣೇಶ್ ಮೋರೆ ಬಂಡು ಬುರುಡ, ಹಾವಿನಾಳ ಗ್ರಾಮದ ಪರಶುರಾಮ್ ವಾಘಮೋರೆ, ಚಡಚಣದ ರಾಜು ವಾಘಮೋರೆ, ಗೌಸ ಕಾಮಲೆ ಹಾಗೂ ಶಂಕರ್ ಬುರುಡ ಎಂದು ಗುರುತಿಸಲಾಗಿದೆ.
ಆರೋಪಿಗಳು ಚಡಚಣ ಪಟ್ಟಣದ ಖೂಬಾ ಮಸೀದಿ ಬಳಿಯ ಶೆಡ್ನಲ್ಲಿ ಸುಣ್ಣದ ನೀರು, ತಂಬಾಕು ಹಾಗೂ ಅಡಕೆ ಚೂರು ಬಳಸಿ ಯಂತ್ರದ ಮೂಲಕ ಕಲಬೆರಕೆ ಮಾವಾ ತಯಾರಿಸಿ ಮಾರಾಟ ಮಾಡುತ್ತಿವುದಾಗಿ ಖಚಿತ ಮಾಹಿತಿ ಮೇರೆಗೆ ಚಡಚಣ ಪೊಲೀಸರು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಪೊಲೀಸರು ಆರೋಪಿಗಳಿಂದ 3 ಲಕ್ಷ ರೂ. ಬೆಲೆ ಬಾಳುವ 30 ಕೆ.ಜಿ 50 ಚೀಲ ಅಡಿಕೆ ಚೂರು, 33 ಸಾವಿರ ಮೌಲ್ಯದ 10 ಕೆ.ಜಿ ಸುಣ್ಣ ಸೇರಿ ತಂಬಾಕು ಚೀಟುಗಳು, ಮಾವಾ ಪ್ಯಾಕೆಟ್, ಮಾವಾ ತಯಾರಿಸುವ ಯಂತ್ರ, 6 ಮೊಬೈಲ್ ಸೇರಿ ಒಟ್ಟು 3.87.300 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.