ಬೆಂಗಳೂರು: ಕೊರೊನಾ ನಡುವೆ ಭಯದಲ್ಲೇ ಕೆಲಸ ಮಾಡುತ್ತಿರುವ ಸಾರಿಗೆ ಇಲಾಖೆ ಸಿಬ್ಬಂದಿಗೆ ಕಳೆದೆರಡು ತಿಂಗಳಿಂದ ವೇತನ ಆಗಿರಲಿಲ್ಲ. ಇದೀಗ ಸಾರಿಗೆ ಇಲಾಖೆ ನೌಕರರಿಗೆ ಸರ್ಕಾರ ವೇತನದ ಹಣವನ್ನು ಬಿಡುಗಡೆ ಮಾಡಿದೆ.
ಒಟ್ಟು 961 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದ್ದು, 4 ತಿಂಗಳ ವೇತನಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಜೂನ್ ಮತ್ತು ಜುಲೈ ತಿಂಗಳ ವೇತನಕ್ಕೆ ಈಗಾಗಲೇ 426 ಕೋಟಿ, ಉಳಿದ ಹಣ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ವೇತನಕ್ಕೆ ಬಿಡುಗಡೆ ಮಾಡಲಾಗಿದೆ.
ಹಣ ಬಿಡುಗಡೆ ಮಾಡಿದ್ದಕ್ಕೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಿಎಂ ಯಡಿಯೂರಪ್ಪಗೆ ಧನ್ಯವಾದ ತಿಳಿಸಿದ್ದಾರೆ. ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯವ್ಯ ಹಾಗೂ ಈಶಾಸ್ಯ ಸಾರಿಗೆ ಸಿಬ್ಬಂದಿಗೆ ಸಂಬಳ ಭರಿಸಲು 961 ಕೋಟಿ ರೂ.ಬಿಡುಗಡೆ ಮಾಡಿದೆ. ಇದರಿಂದ ಒಟ್ಟು ನಾಲ್ಕು ತಿಂಗಳುಗಳ ಸಂಬಳ ಭರಿಸಲು ಅನುಕೂಲವಾಗಲಿದೆ ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಧನ್ಯವಾದ ತಿಳಿಸಿದ್ದಾರೆ.