ನವದೆಹಲಿ: ಪಾಕಿಸ್ತಾನ ಹತ್ತಿ ಮತ್ತು ಸಕ್ಕರೆಗಾಗಿ ಭಾರತದ ಕದ ತಟ್ಟಿದೆ. ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪಾರಕ್ಕೆ ಮುಂದಾಗಿದ್ದು, ಕ್ಯಾಬಿನೆಟ್ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
2021 ಜೂನ್ ವರೆಗೆ ಭಾರತದ ಹತ್ತಿ ಆಮದು ಮಾಡಿಕೊಳ್ಳಲು ಪಾಕಿಸ್ತಾನ ಮುಂದಾಗಿದೆ. ಶೀಘ್ರದಲ್ಲಿಯೇ ಸಕ್ಕರೆ ಆಮದು ಮಾಡಿಕೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪಾಕ್ ಮಾಧ್ಯಮಗಳ ವರದಿ ಮಾಡಿವೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಕುರಿತು ಸರ್ಕಾರಕ್ಕೆ ತಜ್ಞರ ವರದಿ ಸಲ್ಲಿಕೆಯ ಬೆನ್ನಲ್ಲೇ ಇಮ್ರಾನ್ ಖಾನ್ ಸರ್ಕಾರ ಭಾರತದ ಜೊತೆ ವ್ಯಾಪರಕ್ಕೆ ಮುಂದಾಗಿದೆ. ಸಕ್ಕರೆ ಮತ್ತು ಹತ್ತಿಗೆ ಪಾಕಿಸ್ತಾನ ಕೊರತೆ ಅನುಭವಿಸುತ್ತಿದ್ದು. ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳೋದು ದುಬಾರಿ ಆಗಲಿದೆ. ಹಾಗಾಗಿ ತನ್ನ ಒಣಜಂಬವನ್ನ ಬದಿಗಿರಿಸಿ ಭಾರತದ ಮುಂದೆ ತಲೆ ಬಾಗಿದೆ.
19 ತಿಂಗಳಿನಿಂದ ವ್ಯಾಪಾರ ಸ್ಥಗಿತ
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಎಲ್ಲರಿಗೂ ತಿಳಿದಿರುವ ವಿಚಾರ. 2019ರಲ್ಲಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದುಗೊಳಿಸಲಾಗಿತ್ತು. ಆದ್ರೆ ಪಾಕಿಸ್ತಾನ ಈ ವಿಷಯದಲ್ಲಿ ಮೂಗಿ ತೂರಿಸಿ ವಿಶ್ವದಲ್ಲಿ ನಗೆಪಾಟಲಾಗಿತ್ತು. ಆರ್ಟಿಕಲ್ 370 ರದ್ದುಗೊಳಿಸಿದ್ದ ದಿನದಿಂದ ಪಾಕಿಸ್ತಾನ ಭಾರತದಿಂದ ಸಕ್ಕರೆ ಮತ್ತು ಹತ್ತಿಯನ್ನ ಆಮದು ಮಾಡಿಕೊಳ್ಳೋದನ್ನ ನಿಲ್ಲಿಸಿತ್ತು.
ಇದೀಗ ಆರ್ಥಿಕ ತಜ್ಞರ ಸಲಹೆ ಮೇರೆಗೆ ಭಾರತದ ಮುಂದೆ ಬಂದು ಪಾಕಿಸ್ತಾನ ನಿಂತಿದೆ. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ವಸ್ತುಗಳ ಮೇಲೆ ಶೇ.200ರಷ್ಟು ಆಮದು ಶುಲ್ಕ ವಿಧಿಸುತ್ತಿದೆ. ಇದರ ಜೊತೆಗೆ ಪಾಕಿಸ್ತಾನದ ಜೊತೆಗಿನ ಹಲವು ವ್ಯವಹಾರಿಕ ಸಂಬಂಧವನ್ನ ಕಡಿತಗೊಳಿಸಿಕೊಂಡಿತ್ತು.