– ಜೀವನ ಪರ್ಯಂತ ಕೊರಗುವಂತಾಯ್ತು ಹೆತ್ತಮ್ಮ
ಚಿಕ್ಕಮಗಳೂರು: ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಫಸ್ಟ್ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕೊರೊನಾ ಇಲ್ಲದಿದ್ದರೂ ಅದರ ಹೆಸರಲ್ಲಿ ಬಲಿಯಾಗಿರೋ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ನಗರದ ಗೌರಿಕಾಲುವೆಯಲ್ಲಿ ವಾಸವಿದ್ದ ನಫೀಯಾಳಿಎ ಜುಲೈ 24ರಂದು ಜ್ವರ ಹಾಗೂ ಗಂಟಲು ನೋವಿತ್ತು. ಕೂಡಲೇ ಆಕೆಯನ್ನ ಆಕೆ ತಾಯಿ ಸೀಮಾ ನಗರದ ಮೂರು ಪ್ರತಿಷ್ಠಿತ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಎಲ್ಲಾ ಆಸ್ಪತ್ರೆಯವರು ಕೊರೋನಾ ಟೆಸ್ಟ್ ಮಾಡಿಸಬೇಕು, ವೆಂಟಿಲೇಟರ್ ಹಾಕಬೇಕೆಂದು ಸಬೂಬು ಹೇಳಿ ವಾಪಸ್ ಕಳಿಸಿದ್ದಾರೆ.
ಮೂರು ಆಸ್ಪತ್ರೆ ಹಾಗೂ ಕೋವಿಡ್ ಸೆಂಟರ್ಗೆ ಹೋಗಿ ಸರ್ಕಾರಿ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಎರಡರಿಂದ ಮೂರು ಗಂಟೆ ಸಮಯ ಕಳೆದಿತ್ತು. ಎರಡ್ಮೂರು ಗಂಟೆಗಳ ಕಾಲ ನರಳಾಡಿದ ಯುವತಿ, ಸರ್ಕಾರಿ ಆಸ್ಪತ್ರೆಗೆ ಬೆಡ್ ಮೇಲೆ ಮಲಗುತ್ತಿದ್ದಂತೆ ಕಣ್ಮುಚ್ಚಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಕೊರೊನಾದಿಂದ ಡೆತ್ ಆಗಿರೋದು ಎಂದು ಹೆತ್ತವಳಿಗೆ ಮುಖ ತೋರಿಸದೆ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದರು.
ವಿಕಲಚೇತನ ಮಗಳನ್ನ ಹುಟ್ಟಿದಾಗಿನಿಂದ ಕಣ್ಣಲ್ಲಿ ಕಣ್ಣಿಟ್ಟು ಸಾಕಿ-ಸಲಹಿದ್ದ ತಾಯಿ, ಕೊನೆ ಗಳಿಗೆಯಲ್ಲಿ ಮಗಳ ಮುಖ ನೋಡಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರಿಡುತ್ತಿದ್ದರು. ಆದರೆ ನಿನ್ನೆ ಬಂದ ವರದಿಯಲ್ಲಿ ಮೃತ ಯುವತಿಗೆ ಕೊರೊನಾವೇ ಇರಲಿಲ್ಲ. ನಿನ್ನೆಯ ವರದಿಯಲ್ಲಿ ನೆಗೆಟಿವ್ ಬಂದಿದೆ. ಈ ವಿಷಯ ಕೇಳಿ ಹೆತ್ತವಳಿಗೆ ಆಕಾಶವೇ ತಲೆಮೇಲೆ ಕಳಚಿ ಬಿದ್ದಂತಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್ ದೃಢಪಟ್ಟ ಜಗತ್ತಿನ ಮೊದಲ ಶ್ವಾನ ಸಾವು
ಖಾಸಗಿ ಆಸ್ಪತ್ರೆಗಳ ವರ್ತನೆಗೆ ಮೃತ ಬಾಲಕಿಯ ತಾಯಿ ಆಕ್ರೋಶ ಹೊರಹಾಕಿದ್ದಾರೆ. ನನ್ನ ಮಗಳಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು, ಬೇರೆಯವರಿಗಾದರೂ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗಲಿ ಎಂದು ಕಣ್ಣೀರಿಟ್ಟಿದ್ದಾರೆ. ಕೊರೊನಾ.. ಕೊರೊನಾ ಎಂದು ನನ್ನ ಮಗಳಿಗೆ ಚಿಕಿತ್ಸೆ ನೀಡಲಿಲ್ಲ. ಆದರೆ ಇಂದು ನನ್ನ ಮಗಳು ನನ್ನನ್ನ ಬಿಟ್ಟು ಹೋದಳು. ಕೊನೆ ಗಳಿಗೆಯಲ್ಲೂ ನನ್ನ ಮಗಳನ್ನ ನೋಡಲು ಬಿಡಲಿಲ್ಲ ಎಂದು ಕೊರಗುತ್ತಿದ್ದಾರೆ. ಸ್ಮಶಾನದಲ್ಲಿ ನನ್ನ ಮಗಳು ನನ್ನನ್ನ ಕರೆಯುತ್ತಿದ್ದಾಳೆ, ಮಳೆಯಲ್ಲಿ ನೆನೆಯುತ್ತಿದ್ದಾಳೆ ಎಂದು ನನಗೆ ಅನ್ನಿಸುತ್ತಿದೆ ಎಂದು ನೊಂದ ತಾಯಿ ಅಸಹಾಯಕಳಂತೆ ಕಣ್ಣೀರಿಡ್ತಿದ್ದಾರೆ.
ಈ ಮಧ್ಯೆ ಅಧಿಕಾರಿಗಳು ಮೃತ ಬಾಲಕಿಯ ಮನೆ ರಸ್ತೆಯನ್ನ ಸೀಲ್ಡೌನ್ ಮಾಡಿದ್ದಾರೆ. ಆದರೆ ಅಕ್ಕಪಕ್ಕದವರು ಇವರ ಮನೆಯಲ್ಲಿ ಕೋವಿಡ್ ಕೇಸ್ ಇತ್ತು ಎಂದು ಅಸ್ಪ್ರುಶ್ಯರಂತೆ ನೋಡುತ್ತಿದ್ದಾರೆಂದು ಮೃತ ಬಾಲಕಿಯ ತಾಯಿ ಸ್ಥಳೀಯರ ವಿರುದ್ಧವೂ ಅಸಮಾಧಾನ ಹೊರಹಾಕಿದ್ದಾರೆ. ಖಾಸಗಿ ಆಸ್ಪತೆಯವರ ಅಮಾನವೀಯ ವರ್ತನೆ ಹಾಗೂ ಜಿಲ್ಲಾಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಈ ತಾಯಿ ಜೀವನಪರ್ಯಂತ ಮಗಳ ಮುಖವನ್ನ ಕೊನೆ ಬಾರಿ ನೋಡದಂತೆ ಮಾಡಿದರು ಎಂದು ಕೊರಗುವಂತಾಗಿದೆ.