ರಾಷ್ಟ್ರಪತಿಗಳು ಇಫ್ತಾರ್‌ ಆಯೋಜಿಸುವಾಗ ನಿಮ್ಮ ಜಾತ್ಯಾತೀತತೆ ಎಲ್ಲಿ ಹೋಗಿತ್ತು?

1 Min Read

– ಓವೈಸಿಗೆ ಸಂಸದ ತೇಜಸ್ವಿ ಸೂರ್ಯ ಪ್ರಶ್ನೆ

ಬೆಂಗಳೂರು: ರಾಷ್ಟ್ರಪತಿಗಳು ತಮ್ಮ ಕಚೇರಿಯಲ್ಲಿ ಇಫ್ತಾರ್‌ ಪಾರ್ಟಿ ಆಯೋಜಿಸುವಾಗ ನಿಮ್ಮ ʼಜಾತ್ಯಾತೀತತೆʼ ಎಲ್ಲಿ ಹೋಗಿತ್ತು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಂಸದ ಅಸಾದುದ್ದೀನ್ ಓವೈಸಿ ಅವರನ್ನು ಪ್ರಶ್ನಿಸಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ ಎಂದು ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸ್ಮಿಮಿನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ಗೆ ತೇಜಸ್ವಿ ಸೂರ್ಯ, ಭಾರತದ ರಾಷ್ಟ್ರಪತಿಗಳು ಮತ್ತು ರಾಜ್ಯದ ಮುಖ್ಯಮಂತ್ರಿಗಳು ಅಧಿಕೃತ ಕಚೇರಿಯಲ್ಲಿ ಇಫ್ತಾರ್‌ ಪಾರ್ಟಿಯನ್ನು ಆಯೋಜಿಸುತ್ತಿರುವಾಗ ನಿಮ್ಮ ಜಾತ್ಯಾತೀತತೆ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿತ್ತು. ಈ ತಪ್ಪನ್ನು ಈಗ ಸರಿ ಪಡಿಸಲಾಗಿದೆ. ರಜಾಕರಿಂದ ನಮಗೆ ಸಂವಿಧಾನದ ಪಾಠ ಅಗತ್ಯವಿಲ್ಲ ಎಂದು ಬರೆಯುವ ಮೂಲಕ ತಿರುಗೇಟು ನೀಡಿದ್ದಾರೆ.

ಓವೈಸಿ ಹೇಳಿದ್ದು ಏನು?
“ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿಗಳು ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ. 1992ರಲ್ಲಿ ಕ್ರಿಮಿನಲ್‌ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಓವೈಸಿ ಟ್ವೀಟ್‌ ಮಾಡಿದ್ದರು.

ಆಗಸ್ಟ್‌ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಓವೈಸಿ ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ಹೇಳಿದ್ದರು. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!

Share This Article
Leave a Comment

Leave a Reply

Your email address will not be published. Required fields are marked *