ಬೆಂಗಳೂರು: ರಾಜ್ಯ ಸರ್ಕಾರ ಇತ್ತೀಚೆಗೆ ಲಾಕ್ಡೌನ್ ಹೊಸ ನಿಯಮಗಳನ್ನು ಘೋಷಿಸಿದ್ದು, ಈ ಕುರಿತು ನಟ ಯಶ್ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಯಶ್, ಕರ್ನಾಟಕ ಸರ್ಕಾರ ಲಾಕ್ಡೌನ್ ಹೊಸ ನಿಯಮಗಳನ್ನು ಘೋಷಿಸಿದೆ. ಯಾಕೆ ಎಂದು ತಿಳಿದಿಲ್ಲ, ಇದನ್ನೇ ಇಟ್ಟುಕೊಂಡು ನನ್ನ ಹೆಂಡತಿ ನಿಯಮಗಳನ್ನು ರೂಪಿಸುತ್ತಾಳೆ. ಪ್ರತಿ ದಿನ ರಾತ್ರಿ 8ಕ್ಕೆ ಮನೆಗೆ ಬರಬೇಕು, ಭಾನುವಾರ ಸಂಪೂರ್ಣ ಲಾಕ್ಡೌನ್ ಎಂದು ಹೇಳುತ್ತಾಳೆ ಎಂದು ಪೋಸ್ಟ್ ಮಾಡುವ ಮೂಲಕ ಎಚ್ಚರಿಸಿದ್ದಾರೆ.
ಏನೇ ಆಗಲಿ ಈ ಪತ್ನಿ ಸ್ನೇಹಿ ನಿಯಮಗಳು ಸ್ವಾಸ್ಥ್ಯ ಹಾಗೂ ಸುರಕ್ಷತೆ ಕಾಪಾಡುವಲ್ಲಿ ಸಹಾಯವಾಗಲಿವೆ. ಟೇಕ್ ಕೇರ್ ಗಾಯ್ಸ್ ಎಂದು ಬರೆದಿದ್ದು, ಪತ್ನಿ ರಾಧಿಕಾ ಪಂಡಿತ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಲಾಕ್ಡೌನ್ ನಿಯಮಗಳ ಕುರಿತು ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹೊರ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗಿದೆ.
ರಾಜ್ಯ ಸರ್ಕಾರ ಲಾಕ್ಡೌನ್ ನಿಯಮಗಳ ಬದಲಾವಣೆ ಕುರಿತು ಇಂದು ಅಧಿಕೃತ ಆದೇಶ ಹೊರಡಿಸಿದೆ. ಇದರ ಪ್ರಕಾರ, ಜುಲೈ 5 ರಿಂದ ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್ಡೌನ್ ಮಾಡಲಾಗುವುದು. ಅಲ್ಲದೆ ಸರ್ಕಾರಿ ನೌಕರರಿಗೆ 2020 ಜುಲೈ 10 ರಿಂದ ಆಗಸ್ಟ್ 8ರವರಗೆ ಪ್ರತಿ ಶನಿವಾರ ರಜೆ ಸಿಗಲಿದೆ. ರಾಜ್ಯಾದ್ಯಂತ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಚಲನೆಯನ್ನು ನಿಷೇಧಿಸಿದೆ.