– ಕೊರೊನಾ ಸಂಕಷ್ಟದಲ್ಲಿ ಪೋಷಕರಿಗೆ ನೆರವಾಗ್ತಿರೋ ಮಗಳು
ಚಿತ್ರದುರ್ಗ: ಲಾಕ್ಡೌನ್ ಆದಾಗಿನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ದುಮ್ಮಿ ಸಮೀಪದ ಅಂಜಿನಾಪುರದಲ್ಲಿ ಎಂ.ಎಸ್ಸಿ ಪದವೀಧರೆ ದೀಪಶ್ರೀ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಕೂಲಿ ಕೆಲಸ ಮಾಡಲು ಪೋಷಕರೊಂದಿಗೆ ಬರುತ್ತಿದ್ದಾರೆ.
ಇದನ್ನು ಗಮನಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಪದವೀಧರೆಯ ಕೆಲಸವನ್ನು ಮೆಚ್ಚಿ, ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಗಣಿತ ವಿಷಯದಲ್ಲಿ ಎಂಎಸ್ಸಿ ಮಾಡಿರುವ ದೀಪಶ್ರೀ ಅವರ ತಂದೆ-ತಾಯಿಯೊಂದಿಗೆ ನಿತ್ಯ ಬಂದು ನರೇಗ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.
ಸಚಿವ ಕೆ.ಎಸ್. ಈಶ್ವರಪ್ಪ ಅವರು ಶುಕ್ರವಾರ ಸಂಜೆ ನರೇಗಾ ಕಾಮಗಾರಿ ವೀಕ್ಷಿಸಲು ಬಂದಾಗ, ವಿದ್ಯಾರ್ಥಿನಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಜೊತೆಗೆ ಕೊರೊನಾ ಬಿಕ್ಕಟ್ಟು ಮುಗಿದ ನಂತರ ವಿದ್ಯಾರ್ಥಿನಿಗೆ ನನ್ನನ್ನು ಸಂಪರ್ಕಿಸಲು ವ್ಯವಸ್ಥೆ ಮಾಡಿ ಉದ್ಯೋಗ ಕೊಡಿಸುತ್ತೇನೆ ಎಂದು ಸಚಿವರು ಜಿಲ್ಲಾ ಪಂಚಾಯಿತಿ ಸಿಇಒ ಯೋಗೀಶ್ ಅವರಿಗೆ ಸೂಚಿಸಿದ್ದಾರೆ.
ಸಚಿವರು ಯುವತಿಯ ಬಗ್ಗೆ ತಿಳಿದುಕೊಂಡು ಯಾಕಮ್ಮ ಓದಿ ಕೂಲಿ ಕೆಲಸ ಮಾಡುತ್ತೀದ್ದೀಯಾ ನಿನಗೆ ಸರ್ಕಾರಿ ಉದ್ಯೋಗ ಮಾಡುವ ಗುರಿ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ. ಆಗ ಮುಂಬರುವ ಜೀವನದಲ್ಲಿ ಉಪನ್ಯಾಸಕಿ ಆಗುವ ಬಯಕೆ ಇದೆ ಎಂದು ದೀಪಶ್ರೀ ಪ್ರತಿಕ್ರಿಯಿಸಿದ್ದಾರೆ ಹಾಗೂ ಕೊರೊನಾ ಸಂಕಷ್ಟದ ಕಾಲದಲ್ಲಿ ತಂದೆ-ತಾಯಿಗೆ ನೆರವಾಗುವ ಉದ್ದೇಶದಿಂದ ನರೇಗಾ ಕೂಲಿ ಕೆಲಸ ಮಾಡುತ್ತಿದ್ದೇನೆ ಎಂದು ದೀಪಶ್ರೀ ತಿಳಿಸಿದ್ದಾರೆ.