ಮುಂಬೈ: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಮಹಿಳಾ ಟೆಸ್ಟ್ ಮತ್ತು ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಅವರ ಹೆಸರನ್ನು ಪ್ರಸ್ತುತ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮವಾದ ಬೌಲಿಂಗ್ ಮಾಡಿ 79 ಪಂದ್ಯಗಳಿಂದ 413 ವಿಕೆಟ್ ಪಡೆದು ಮಿಂಚಿದ್ದಾರೆ. ಅದಲ್ಲದೆ ಇತ್ತಿಚೇಗೆ ಮುಕ್ತಾಯಗೊಂಡ ವಿಶ್ವಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಪಡೆದು ತಂಡಕ್ಕೆ ನೆರವಾಗಿದ್ದರು. ಅದೇ ರೀತಿ ಭಾರತ ಮಹಿಳಾ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್ ಏಕದಿನ ಕ್ರಿಕೆಟ್ನಲ್ಲಿ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ ಮೊದಲ ಮಹಿಳಾ ಅಟಗಾರ್ತಿಯೆಂಬ ವಿಶ್ವದಾಖಲೆಯನ್ನು ಬರೆದಿದ್ದರು. ಇದನ್ನೂ ಓದಿ: ಏಕದಿನ ಕ್ರಿಕೆಟ್ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ
ಇವರೊಂದಿಗೆ ಕೆ.ಎಲ್ ರಾಹುಲ್, ಶಿಖರ್ ಧವನ್ ಮತ್ತು ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂಬ ಬಗ್ಗೆ ಮೂಲಗಳಿಂದ ತಿಳಿದುಬಂದಿದೆ. ಕೇಂದ್ರ ಕ್ರೀಡಾ ಇಲಾಖೆ ಜೂನ್ 21ರಂದು ಪ್ರಶಸ್ತಿಗಾಗಿ ಹೆಸರನ್ನು ನೋಂದಾಯಿಸಲು ಕೊನೆ ದಿನಾಂಕ ನಿಗದಿಪಡಿಸಿತ್ತು. ಅದರಂತೆ ಇದೀಗ ಬಿಸಿಸಿಐ ಈ ಕ್ರಿಕೆಟಿಗರ ಹೆಸರನ್ನು ಶಿಫಾರಸು ಮಾಡಿದೆ ಎಂದು ವರದಿ ಹೊರಬಿದ್ದಿದೆ. ಕಳೆದ ವರ್ಷ ಭಾರತ ಕ್ರಿಕೆಟ್ ತಂಡದ ಹಿಟ್ಮ್ಯಾನ್ ರೋಹಿತ್ ಶರ್ಮಾ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದಿದ್ದರು. ಇದನ್ನೂ ಓದಿ: ಅಶ್ವಿನ್ಗೆ ಒಲಿದ ಐಸಿಸಿ ತಿಂಗಳ ಕ್ರಿಕೆಟಿಗ ಪ್ರಶಸ್ತಿ