ಹುಬ್ಬಳ್ಳಿ: ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬರದೇ ಕೊರೊನಾ ಸೋಂಕಿತ ರಾಜ್ಯ ರೈಲ್ವೆ ಪೊಲೀಸರು ರಾತ್ರಿಯಿಡಿ ಪರದಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಸಿಎಂ ಎಚ್ಚರಿಕೆ ನಂತರವೂ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಎಡವಟ್ಟು ಆಗಿದೆ. ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಆವರಣದಲ್ಲಿರುವ ಉಡಾನ್ ಅಂತ್ಯೋದಯ ಕಲ್ಯಾಣ ಕೇಂದ್ರದಲ್ಲಿ ಉಳಿದುಕೊಂಡಿದ್ದ ರೈಲ್ವೆ ಪೊಲೀಸರಿಗೆ ಸೋಂಕು ತಗುಲಿದೆ. ಇಬ್ಬರು ಎಎಸ್ಐ, ಓರ್ವ ಪಿಸಿಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬರದಿರುವುದರಿಂದ ರೈಲ್ವೆ ಪೊಲೀಸರು ರೈಲ್ವೆ ಕಟ್ಟಡದ ಟೆರೆಸ್ ಮೇಲೆ ಉಳಿದುಕೊಂಡಿದ್ದರು.
ಸೋಂಕು ಪತ್ತೆಯಾಗಿ ಎರಡು ದಿನವಾದರೂ ಅಂಬುಲೆನ್ಸ್ ಬರದೆ ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದರೂ ಕರೆದುಕೊಂಡು ಹೋಗಿರಲಿಲ್ಲ. ಆದರೆ ಈ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಬಂದು ಸೋಂಕಿತರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಒಂದೇ ಕಟ್ಟಡದಲ್ಲಿ 30 ರಿಂದ 40 ಸಿಬ್ಬಂದಿ ಇದ್ದಾರೆ. ಮೂವರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇನ್ನುಳಿದ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಿದೆ.