ವೆಲ್ಲೂರು: ಪತಿಯ ಅಕ್ರಮ ಸಂಬಂಧ ಆರೋಪದಿಂದ ಬೇಸತ್ತ ಪತ್ನಿಯೊಬ್ಬಳು ಪತಿಯ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ತಮಿಳುನಾಡಿನ ಗುಡಿಯಾಟ್ಟಂ ಎಂಬಲ್ಲಿ ನಡೆದಿದೆ.
ಪತ್ನಿ ಸರಸುವನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಆಕೆಯ ಪರ್ಸ್ ನಲ್ಲಿ ಪತಿಯ ಕಟ್ ಆಗಿದ್ದ ಮರ್ಮಾಂಗ ಪತ್ತೆಯಾಗಿದೆ. ಘಟನೆ ಬಳಿಕ ಸರಸು ತನ್ನ ತವರು ಮನೆಗೆ ಹೊರಟಿದ್ದಳು. ಆದರೆ ಮಾರ್ಗ ಮಧ್ಯೆಯೇ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಇನ್ಸ್ ಪೆಕ್ಟರ್ ಎಂ.ಟಿ.ಇರುಧ್ಯರಾಜ್ ಹೇಳಿದ್ದಾರೆ.
ಏನಿದು ಘಟನೆ?: ವಾಣಿಯಾರ್ ಪಂಗಡಕ್ಕೆ ಸೇರಿದ ಸರಸು ಎಸ್.ಸಿ ಸಮುದಾಯದ ಜಗದೀಶನ್ ಎಂಬಾತನ ಜೊತೆ 14 ವರ್ಷದ ಹಿಂದೆ ಮದುವೆಯಾಗಿತ್ತು. ಇವರಿಬ್ಬರಿಗೂ ಗುಡಿಯಾಟ್ಟಂನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ವೇಳೆ ಲವ್ ಆಗಿತ್ತು. ಇವರಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
ಆದರೆ ಕಳೆದ ವರ್ಷ ಪತಿ ಪತ್ನಿ ನಡುವೆ ಜಗಳವಾಗಿದೆ. ಬಳಿಕ ಸರಸು ತನ್ನ ತವರು ಮನೆ ಸೇರಿದ್ದಳು. ಆದರೆ ಜುಲೈ 17ರಂದು ತನ್ನ ಬರ್ತ್ ಡೇಗೆ ಬರುವಂತೆ ಹಿರಿಯ ಪುತ್ರ ಸರಸುಗೆ ಮನವಿ ಮಾಡಿದ್ದ. ಈ ಬೇಡಿಕೆಗೊಪ್ಪಿ ಆಕೆ ಮನೆಗೆ ಬಂದಿದ್ದಳು. ಇದಾದ ಬಳಿಕ ಬುಧವಾರ ಕುಡಿದು ಮನೆಗೆ ಬಂದಿದ್ದ ಜಗದೀಶನ್ ಸರಸು ಜೊತೆ ವಿನಾಕಾರಣ ಜಗಳ ಶುರು ಮಾಡಿದ್ದ. ಈ ವೇಳೆ ಆತ ಆಕೆಯ ಶೀಲ ಶಂಕಿಸಿ ಮಾತನಾಡಿದ್ದ. ತವರು ಮನೆಯಲ್ಲಿದ್ದ ವೇಳೆ ಯಾವುದಾದರೂ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ಕೇಳಿದ್ದಾನೆ. ಜೊತೆಗೆ ನಿನಗೀಗ ವಯಸ್ಸಾಗಿದೆ. ಹೀಗಾಗಿ ನಾನು ಬೇರೊಬ್ಬಳನ್ನು ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಸರಸು ಗಂಡನಿಗೆ ಎದುರುತ್ತರ ಕೊಟ್ಟಿದ್ದಾಳೆ. ನಾನಿಲ್ಲದ ವೇಳೆ ಈ ಮನೆಯಲ್ಲಿ ನೀನು ಅಕ್ರಮ ಸಂಬಂಧವಿಟ್ಟುಕೊಂಡಿದ್ದೀಯಾ ಎಂದು ಹೇಳಿದ್ದಾಳೆ. ಈ ಗಲಾಟೆ ರಾತ್ರಿ ಸುಮಾರು 2 ಗಂಟೆಯವರೆಗೆ ಮುಂದುವರೆದಿದೆ. ಗುರುವಾರ ಬೆಳಗಿನ ಜಾವ 3 ಗಂಟೆ ವೇಳೆಗೆ ಸರಸು ಅಡುಗೆ ಕೋಣೆಯಲ್ಲಿದ್ದ ಹರಿತವಾದ ಚಾಕುವನ್ನು ತಂದು ಮರ್ಮಾಂಗವನ್ನು ಕಟ್ ಮಾಡಿದ್ದಾಳೆ. ಈ ಕೃತ್ಯ ನಡೆಸಿದ ತಕ್ಷಣ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ಜೊತೆಗೆ ಗಂಡನ ಕತ್ತರಿಸಿದ ಮರ್ಮಾಂಗವನ್ನು ಆಕೆಯ ಪರ್ಸ್ ನಲ್ಲಿಟ್ಟುಕೊಂಡಿದ್ದಳು ಎಂದು ಸಬ್ ಇನ್ಸ್ ಪೆಕ್ಟರ್ ಎ.ಕೃಷ್ಣಮೂರ್ತಿ ಹೇಳಿದ್ದಾರೆ.
ಜಗದೀಶ್ ಕಿರುಚಾಟ ಕೇಳಿಸಿಕೊಂಡ ನೆರೆ ಮನೆಯವರು ಹಾಗೂ ಸ್ಥಳೀಯರು ಗುಡಿಯಾಟ್ಟಂ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಆತನನ್ನು ವೆಲ್ಲೂರು ಮೆಡಿಕಲ್ ಕಾಲೇಜಿಗೆ ದಾಖಲಿಸಿ ಆಪರೇಷನ್ ಮಾಡಿದ್ದಾರೆ. ಸತ್ಯ ಜಗದೀಶ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಂಧಿತ ಸರಸುವಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.