ಹಾವೇರಿ: ಸ್ಪೀಕರ್ ಕೆ.ಬಿ ಕೋಳಿವಾಡ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಾಗುತ್ತಾರೆ. ಮೊನ್ನೆ-ಮೊನ್ನೆಯಷ್ಟೇ ವಿಧಾನಸೌಧದ ವಜ್ರಮಹೋತ್ಸವದ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಆತುರದ ನಿರ್ಧಾರ ತೆಗೆದುಕೊಂಡಿದ್ದರು. ಈಗ ರಾಣೇಬೆನ್ನೂರು ಕ್ಷೇತ್ರದಲ್ಲೂ ಒಂದು ಎಡವಟ್ಟು ಮಾಡಿದ್ದಾರೆ.
ಸ್ಪೀಕರ್ ಕೆ.ಬಿ ಕೋಳಿವಾಡ ಅವರು ಮುಖ್ಯಮಂತ್ರಿಗಳಿಂದ ಶಹಾಬ್ಬಾಸ್ ಗಿರಿ ಪಡೆಯೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ನವಂಬರ್ 5 ರಂದು ಕೋಳಿವಾಡ ಅವರ ಜನ್ಮದಿನ ಇತ್ತು. ಅಲ್ಲದೇ ಅವತ್ತು ಹಾವೇರಿಯ ಅವರ ಕ್ಷೇತ್ರ ರಾಣೇಬೆನ್ನೂರಿನಲ್ಲಿ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಡೋಕೆ ಸಿಎಂ ಸಾಹೇಬ್ರು ಬಂದಿದ್ದರು.
ಈ ವೇಳೆ ಮುಖ್ಯಮಂತ್ರಿಗಳಿಂದ ಭೇಶ್ ಅನ್ನಿಸಿಕೊಳ್ಳೋಕೆ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯ ಹಮ್ಮಿಕೊಂಡಿದ್ದರು. ಇದಕ್ಕಾಗಿ 125 ಟ್ರೈಸಿಕಲ್ ಗಳನ್ನು ನಗರದ ಮೈದಾನಕ್ಕೆ ತಂದು ನಿಲ್ಲಿಸಿದ್ದರು. ಸಾಂಕೇತಿಕವಾಗಿ ಸಿಎಂ ಕಡೆಯಿಂದ ಒಂದಿಬ್ಬರಿಗೆ ಟ್ರೈಸಿಕಲ್ ಕಿ ಕೊಡಿಸಿದ್ದರು. ಅದು ಬಿಟ್ಟರೆ ಇಲ್ಲಿವರೆಗೂ ಯಾರಿಗೂ ಟ್ರೈಸಿಕಲ್ ವಿತರಿಸಿಲ್ಲ. 123 ಟ್ರೈಸಿಕಲ್ ಗಳು ಬಿಸಿಲಲ್ಲೇ ನಿಂತಿವೆ.
ವಿಧಾನಸೌಧ ವಜ್ರಮಹೋತ್ಸವ ವೇಳೆ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ಆತುರಾತುರ ನಿರ್ಧಾರ ಕೈಗೊಂಡಿದ್ದ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾಳಜಿ ತೋರಿಸುತ್ತಿಲ್ಲ. ಇಲ್ಲಿವರೆಗೂ ಟ್ರೈಸಿಕಲ್ ವಿತರಣೆ ಆಗಿವೆಯೋ ಇಲ್ವೋ ಎಂದು ವಿಚಾರಿಸುವ ಸೌಜನ್ಯವೂ ತೋರಿಸಿಲ್ಲ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.