ಬಳ್ಳಾರಿ: ನಗರದ ಅಧಿ ದೇವತೆ, ಶತಮಾನಗಳ ಇತಿಹಾಸವಿರುವ ಶ್ರೀ ಕನಕ ದುರ್ಗಮ್ಮ ದೇವಿಯ ವಾರ್ಷಿಕ ಸಿಡಿಬಂಡಿ ರಥೋತ್ಸವ ಫಾಲ್ಗುಣ ಶುದ್ಧ ದಶಮಿಯಾದ ಮಂಗಳವಾರ ಲಕ್ಷಾಂತರ ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.
ಜಿಲ್ಲೆಯಲ್ಲಷ್ಟೇ ಅಲ್ಲದೇ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ದಾವಣಗೆರೆ, ಶಿವಮೊಗ್ಗ, ಗದಗ, ಧಾರವಾಡ, ನೆರೆಯ ಆಂಧ್ರಪ್ರದೇಶದ ಕರ್ನೂಲು, ಅನಂತಪುರ, ಕಡಪಾ ಜಿಲ್ಲೆಗಳಿಂದ ಸಹಸ್ರಾರು ಜನರು ಸಿಡಿಬಂಡಿ ರಥೋತ್ಸವಕ್ಕೆ ಆಗಮಿಸಿದ್ದರು. ಬೆಳಿಗ್ಗೆಯಿಂದ ಶ್ರೀ ಕನಕ ದುರ್ಗಮ್ಮದೇವಿಗೆ ವಿವಿಧ ಪೂಜೆಗಳನ್ನು ಸಮರ್ಪಿಸಲಾಗಿತ್ತು. ದೇವಿಗೆ ಚಿನ್ನದ ಕವಚ ಹಾಗೂ ನವರತ್ನ ಖಚಿತ ಕಿರೀಟದ ಅಲಂಕಾರ ಮಾಡಲಾಗಿತ್ತು.
ಸಿಡಿಬಂಡಿಯನ್ನು ಸಿಂಗರಿಸುವ ಹಾಗೂ ಸಿಡಿಬಂಡಿಯನ್ನು ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣೆ ಮಾಡಿಸುವುದು ಸಜ್ಜನ ಗಾಣಿಗ ಸಮುದಾಯದ ಜನರಿಂದ ಶತಮಾನಗಳಿಂದ ನಡೆದುಕೊಂಡುಬಂದ ಈ ಕಾರ್ಯವನ್ನು ಜನ ನಿಷ್ಠೆಯಿಂದ ನೆರವೇರಿಸಿದ್ರು.
ನಿನ್ನೆ ಸಂಜೆ ನಗರದ ಕೌಲ್ ಬಜಾರ್ ಪ್ರದೇಶದಿಂದ ಸಿಡಿಬಂಡಿಯನ್ನು ಎಳೆಯಲು ಮೂರು ಜೋಡಿ ಎತ್ತುಗಳನ್ನು ಗಾಣಿಗ ಸಮುದಾಯ ಹೋರಿಗಳನ್ನು ಮೆರವಣಿಗೆಯಲ್ಲಿ ತರಲಾಯಿತು. ಸೂರ್ಯಾಸ್ತಮದ ವೇಳೆ ಸಿಡಿ ಬಂಡಿ ರಥೋತ್ಸವ ಆರಂಭವಾಯಿತು.
ಈ ಬಾರಿ ಎತ್ತುಗಳು ಹೊಸದಾಗಿ ಇದ್ದರಿಂದ ಆರಂಭದಲ್ಲಿ ಸಿಡಿಬಂಡಿಯ ನೊಗವನ್ನು ಸರಿಯಾಗಿ ತೆಗೆದುಕೊಳ್ಳದೆ ಬಳಗ ಎಸೆದವು. ಅದನ್ನು ನಿರ್ವಹಿಸುವ ಜನತೆ ಕೂಡಲೇ ಅದನ್ನು ಸರಿಪಡಿಸಿ ಸಿಡಿಬಂಡಿಯನ್ನು ದೇವಸ್ಥಾನದ ಸುತ್ತ ಮೂರು ಸುತ್ತು ಹಾಕಲಾಯಿತು. ಸಿಡಿ ಬಂಡಿಗೆ ಭಕ್ತರು ಕೋಳಿ, ಬಾಳೆಹಣ್ಣು, ಉತ್ತತ್ತಿ, ಹೂ ಎಸೆದು ನೆರೆದ ಸಾವಿರಾರು ಜನತೆ ತಮ್ಮ ಹರಕೆ ತೀರಿಸಿದರು.
ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಸೇರಿದ್ದರಿಂದ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.