ಬಾಗಲಕೋಟೆ: ಎಂಜಿನಿಯರ್ ಓದಿದ್ರೂ ಒಳ್ಳೆಯ ಕೆಲಸ ಬಿಟ್ಟು ಪ್ರಗತಿ ಪರ ರೈತರಾಗಿರುವ ಬಾಗಲಕೋಟೆಯ ಬಸನಗೌಡ ಪೊಲೀಸ್ ಪಾಟೀಲ್ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಗ್ರಾಮದ ಸುತ್ತಮುತ್ತಲ ರೈತರಿಗೆ ಇವರು ಕೃಷಿ ಡಿಕ್ಷನರಿ ಎಂದು ಫೇಮಸ್. ಕೃಷಿ ಬಗ್ಗೆ ಏನೇ ಮಾಹಿತಿ ಕೇಳಿದ್ರೂ ಥಟ್ ಅಂತ ಉತ್ತರಿಸುತ್ತಾರೆ.
ಬಸನಗೌಡ ಅವರು ಜಿಲ್ಲೆಯ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ನಿವಾಸಿ. ಇವರನ್ನು ಕೃಷಿಯಲ್ಲಿ ಸಾಧಕ, ಕೃಷಿ ವಿಜ್ಞಾನಿ, ಕೃಷಿ ಪಂಡಿತ ಹೀಗೆ ಇವರನ್ನ ಏನಂತಾ ಕರೀಬೇಕು ಅನ್ನೋದೇ ಗೊತ್ತಾಗಲ್ಲ. ಅಷ್ಟರ ಮಟ್ಟಿಗೆ ಕೃಷಿಯಲ್ಲಿ ಪಾಂಡಿತ್ಯ ಸಂಪಾದಿಸಿದ್ದಾರೆ.
ಕೃಷಿ ಬಗ್ಗೆ ಎರಡೂವರೆ ಸಾವಿರದಷ್ಟು ಪುಸ್ತಕ ಹಾಗೂ ಮ್ಯಾಗಜಿನ್ ಖರೀದಿಸಿದ್ದು ಮನೆಯನ್ನೇ ಕೃಷಿ ಗ್ರಂಥಾಲಯ ಮಾಡಿಕೊಂಡಿದ್ದಾರೆ. 180 ಕೃಷಿ ಪಂಡಿತರ ಜೀವನ ಚರಿತ್ರೆಯ ಅಲ್ಬಂ, 150 ಕೃಷಿ ಸಂಬಂಧಿ ಸಿಡಿ ಕಲೆಹಾಕಿ ಸುತ್ತಮುತ್ತಲ ರೈತರಿಗೆ ವಿಭಿನ್ನ ಕೃಷಿ ಪದ್ದತಿಯ ಬಗ್ಗೆ ಉಪಯುಕ್ತ ಮಾಹಿತಿ ನೀಡ್ತಿದ್ದಾರೆ.
ಪಬ್ಲಿಕ್ ಟಿವಿ ಅಭಿಮಾನಿಯಾಗಿರುವ ಬಸನಗೌಡ್ರು, ಕೃಷಿಯಲ್ಲಿ ಸಾಧನೆ ಮಾಡಿ ಪಬ್ಲಿಕ್ ಟಿವಿಯಲ್ಲಿ ಗುರುತಿಸಿಕೊಂಡ ಪಬ್ಲಿಕ್ ಹೀರೋಗಳ ಮನೆಗೆ ಭೇಟಿ ನೀಡ್ತಾರೆ. ಅವರಿಂದ ಕೃಷಿ ಬಗ್ಗೆ ಮಾಹಿತಿ ಪಡೆದು ಜಿಲ್ಲೆಯ ರೈತರಿಗೆ ತಿಳಿಸಿಕೊಡ್ತಾರೆ. ಹೆಬ್ಬೇವು, ಮೆಣಸು, ತರಕಾರಿ ಬೆಳೆಗಳು, ತೊಗರಿ, ದಾಳಿಂಬೆ, ಈರುಳ್ಳಿ ಹೀಗೆ ವಿವಿಧ ಬೆಳೆ ಬೆಳೆದು ವಿಭಿನ್ನ ರೈತ ಎನಿಸಿಕೊಂಡಿದ್ದಾರೆ.