ಬೆಂಗಳೂರು: ಶನಿವಾರದಿಂದ ಮಹಾನಗರಿ ಬೆಂಗಳೂರಿನ ಮಂದಿಗೆ ಮೊದಲ ಹಂತದ ನಮ್ಮ ಮೆಟ್ರೋ ಸೇವೆ ಸಂಪೂರ್ಣವಾಗಿ ಲಭ್ಯವಾಗಲಿದೆ.
ಶನಿವಾರದಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಯಲೇಚನಹಳ್ಳಿ-ಸಂಪಿಗೆ ರಸ್ತೆ ಮಾರ್ಗ ಲೋಕಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ 42.3 ಕಿಲೋ ಮೀಟರ್ ದೂರದ ಮೊದಲ ಹಂತದ ಮೆಟ್ರೋ ಸೇವೆ ಸಂಪೂರ್ಣವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಇಂದು ಮತ್ತು ನಾಳೆ ರಾಜಾಜಿನಗರದಿಂದ ಸಂಪಿಗೆ ರಸ್ತೆ ನಿಲ್ದಾಣವರೆಗೆ ಮೆಟ್ರೋ ಸಂಚಾರ ಇರಲ್ಲ.
ಇದೇ ಹೊತ್ತಲ್ಲಿ ಟಿಕೆಟ್ ದರ ಶೇಕಡಾ 10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಮೆಟ್ರೋದಿಂದ ಇದುವರೆಗೆ ಆಗಿರೋ ನಷ್ಟವನ್ನು ಸರಿದೂಗಿಸುವ ಸಲುವಾಗಿ ಪ್ರಯಾಣ ದರ ಏರಿಕೆಗೆ ನಿರ್ಧರಿಸಲಾಗಿದ್ದು, ರಾಜ್ಯ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಪ್ರಸ್ತುತ 2011ರಲ್ಲಿ ಅಂದರೆ 6 ವರ್ಷಗಳ ಹಿಂದೆ ನಿಗದಿಪಡಿಸಿದ ದರವೇ ಚಾಲ್ತಿಯಲ್ಲಿದೆ. ಅದ್ರೆ ನಿರ್ವಹಣಾ ವೆಚ್ಚ ಹೆಚ್ಚಾಗಿದ್ದು, ಸರ್ಕಾರಕ್ಕೆ 260 ಕೋಟಿ ರೂಪಾಯಿ ಹೊರೆಬೀಳ್ತಿದೆ ಎಂದು ಹೇಳಲಾಗಿದೆ.
ನಾಗಸಂದ್ರದಿಂದ ಯಲೇಚನಹಳ್ಳಿಯವರೆಗೆ ಪ್ರಯಾಣ ದರ 60 ರೂಪಾಯಿಯಾಗಲಿದೆ. ಆರಂಭದ ನಿಲ್ದಾಣಗಳಲ್ಲಿ ಟಿಕೆಟ್ 2 ರಿಂದ 5 ರೂಪಾಯಿ ದುಬಾರಿಯಾಗಲಿದೆ.