ಚಿಕ್ಕಬಳ್ಳಾಪುರ: ತಮಿಳುನಾಡು ಮೂಲದ ಆರ್ ಸಿ ಸಿ ಎಲ್ ಕನ್ ಸ್ಟ್ರಕ್ಷನ್ ಕಂಪನಿಗೆ ಸೇರಿದ ಲಾರಿಯೊಂದು ಓಮ್ನಿ ಇಕೋ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಕಾಪುರ ಗೇಟ್ ಬಳಿ ನಡೆದಿದೆ. ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಹುಣೇಸಹಳ್ಳಿ ಗ್ರಾಮದ 50 ವರ್ಷದ ವೇಣುಗೋಪಾಲ ಶರ್ಮಾ ಹಾಗೂ ಅವರ ಪತ್ನಿ ಸ್ವರ್ಣಲತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ದಂಪತಿಯ ಮೂವರು ಮಕ್ಕಳಾದ ರಮ್ಯಾ, ಮಾನಸಾ ಮತ್ತೊಂದು ಚಿಕ್ಕ ಮಗು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಮಿಳುನಾಡು ಮೂಲದ ರಾಮಲಿಂಗಂ ಕನ್ ಸ್ಟ್ರಕ್ಷನ್ ಗೌರಿಬಿದನೂರು ಬಳಿ ಹೆದ್ದಾರಿ ಕಾಮಗಾರಿ ನಡೆಸುತ್ತಿದೆ. ಹೀಗಾಗಿ ಕಾಮಗಾರಿಗಾಗಿ ಜೆಸಿಬಿಯನ್ನ ಲಾರಿ ಮುಖಾಂತರ ಮತ್ತೊಂದೆಡೆಗೆ ಸಾಗಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಘಟನೆ ನಂತರ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.