ಕಾರವಾರ: ಚುನಾವಣೆ ಸಮೀಪಿಸುತಿದ್ದಂತೆ ರಾಜಕಾರಣಿಗಳ ಆಶ್ವಾಸನೆಗಳಿಗೇನೂ ಕಡಿಮೆ ಇಲ್ಲ. ಆದ್ರೆ ಈ ಹಿಂದೆ ನೀಡಿದ ಆಶ್ವಾಸನೆಗಳನ್ನು ನೆರವೇರಿಸದೇ ಮರೆತ ರಾಜಕಾರಣಿಗಳಿಗೀಗ ಚುನಾವಣೆ ಬಹಿಷ್ಕಾರ ದೊಡ್ಡ ತಲೆನೋವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಕೂರ್ವೆ ಗ್ರಾಮ ಚುನಾವಣೆಯನ್ನು ಬಹಿಷ್ಕರಿಸಿದೆ.
ಸಾಮನ್ಯವಾಗಿ ಚುನಾವಣೆ ಹತ್ತಿರವಾಗಿದ್ದಂತೆ ರಾಜಕೀಯ ಪಕ್ಷಗಳು ಎಚ್ಚೆತ್ತುಕೊಳ್ಳೊತ್ತವೆ. ಆದ್ರೆ ಈ ಬಾರಿ ಕಾಮನ್ ಮೆನ್ಗಳು ಸಹ ಎಚ್ಚೆತ್ತುಕೊಂಡಿದ್ದಾರೆ. ಬೇಡಿಕೆ ಈಡೇರಿಸುವವರಿಗೂ ಚುನಾವಣೆ ಬೇಡ ಅಂತ ಕೂರ್ವೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ. ಕೂರ್ವೆ ಗ್ರಾಮ ಗಂಗಾವಳಿ ನದಿಯ ನೀರಿನಿಂದ ಆವರಿಸಿದ್ದು ದ್ವೀಪದಂತಿದೆ. 47 ಕುಟುಂಬಗಳು ವಾಸವಿರುವ ಈ ಗ್ರಾಮಕ್ಕೆ ಹೋಗಬೇಕಾದ್ರೆ ಇಂದಿಗೂ ದೋಣಿಯಲ್ಲಿಯೇ ಸಂಚರಿಸಬೇಕು.
ಈ ಹಿಂದೆ ಗ್ರಾಮಕ್ಕೆ ಸರ್ಕಾರದಿಂದ ಒಂದು ದೂಣಿಯನ್ನು ನೀಡಲಾಗಿತ್ತು. ಆದ್ರೆ ಕೆಲವು ಕಿಡಿಗೇಡಿಗಳು ದೋಣಿಯನ್ನು ಸುಟ್ಟುಹಾಕಿದ್ರು. ಈಗ ಈ ಗ್ರಾಮಕ್ಕೆ ಯಾವುದೇ ದೋಣಿಗಳು ಇಲ್ಲದಿದ್ರೂ ಜನರೇ ತಮ್ಮ ಸ್ವಂತ ದೋಣಿಯನ್ನು ಬಳಸಿಕೊಂಡು ದಿನನಿತ್ಯದ ವಸ್ತುಗಳನ್ನು ತರುತ್ತಾರೆ. ಇನ್ನು ಇಲ್ಲಿ ಅಂಗನವಾಡಿ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಇದೆ. ಆದ್ರೆ ಶಿಕ್ಷಕರು ಈ ಭಾಗಕ್ಕೆ ಬರಬೇಕಿದ್ರೆ ಹಾಗೂ ಬಿಸಿಯೂಟಕ್ಕೆ ಸಾಮಗ್ರಿ ತರಬೇಕಿದ್ರೆ ಹರಸಾಹಸ ಪಡಬೇಕಿದೆ.
ಗ್ರಾಮಕ್ಕೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ತೂಗು ಸೇತುವೆ ನಿರ್ಮಿಸಬಹುದಿತ್ತು. ಆದರೆ ಜನಪ್ರತಿನಿಧಿಗಳ ಅಸಡ್ಡೆ ಇವರನ್ನ ಕತ್ತಲಲ್ಲಿ ಇರುವಂತೆ ಮಾಡಿದೆ. ಹೀಗಾಗಿ ಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವ ತೀರ್ಮಾನವನ್ನು ಗ್ರಾಮದ ಜನರು ಕೈಗೊಂಡಿದ್ದಾರೆ.