– ಭಾರತದಲ್ಲಿ 1.14 ಲಕ್ಷ ಜನರಿಗೆ ಕಚ್ಚಿದ ಹಾವು
– ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ-24437 ಜನರಿಗೆ ಹಾವು ಕಡಿತ
ನವದೆಹಲಿ: ಕಳೆದ 7 ತಿಂಗಳಲ್ಲಿ ಭಾರತದಲ್ಲಿ 1.14 ಲಕ್ಷ ಜನರಿಗೆ ಹಾವು ಕಚ್ಚಿದೆ. ಇದರಲ್ಲಿ 49 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಹಾವು ಕಡಿತಕ್ಕೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿದ್ದು ಈ ವರದಿಯ ಅಂಶ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಒಟ್ಟು 1.14 ಲಕ್ಷ ಜನರಲ್ಲಿ 94,874 ಮಂದಿ ಗ್ರಾಮೀಣ ಭಾಗದವರು ಎನ್ನುವುದು ವಿಶೇಷ. ಈ ವರ್ಷ ಏಪ್ರಿಲ್ 1ರಿಂದ ಅಕ್ಟೋಬರ್ 31ರವರೆಗಿನ ಅವಧಿಯ ಲೆಕ್ಕಾಚಾರದಂತೆ ಕರ್ನಾಟಕದಲ್ಲಿ ಒಟ್ಟು 7,619 ಮಂದಿಗೆ ಹಾವು ಕಚ್ಚಿದೆ.
ಹಾವು ಕಡಿತಕ್ಕೊಳಗಾದವರ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಕರ್ನಾಟಕ 5ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 24,437, ಪಶ್ಚಿಮ ಬಂಗಾಳ 23,666, ಆಂಧ್ರಪ್ರದೇಶ 10,735, ಒಡಿಶಾ 7,657, ಕರ್ನಾಟಕ 7,619, ಉತ್ತರ ಪ್ರದೇಶ 6,976, ತಮಿಳುನಾಡು 4,567, ತೆಲಂಗಾಣದಲ್ಲಿ 4,079 ಮಂದಿಗೆ ಹಾವು ಕಚ್ಚಿದೆ.
ಮಹಾರಾಷ್ಟ್ರದಲ್ಲಿ 19,012 ಪ್ರಕರಣ ಗ್ರಾಮೀಣ ಪ್ರದೇಶ ಹಾಗೂ 5,425 ಪ್ರಕರಣ ನಗರ ಪ್ರದೇಶದಲ್ಲಿ ವರದಿಯಾಗಿವೆ. ನಾಸಿಕ್ ನಲ್ಲಿ 2,696 ಜನರಿಗೆ ಕಚ್ಚಿದರೆ, ಮುಂಬೈನಲ್ಲಿ 133 ಪ್ರಕರಣಗಳು ಮಾತ್ರ ದಾಖಲಾಗಿವೆ.
ಬಯಲಲ್ಲೇ ಮಲಮೂತ್ರ ವಿಸರ್ಜನೆ, ರಾತ್ರಿ ವೇಳೆಯಲ್ಲಿ ಮನೆಯ ಹೊರಗಡೆ ನಿದ್ದೆ, ಶುಚಿತ್ವದ ಕೊರತೆ, ಹಾವು ಕಚ್ಚಿದರೆ ಏನು ಮಾಡಬೇಕು ಎಂಬ ಮಾಹಿತಿಯ ಕೊರತೆಗಳೇ ಸಾವಿನ ಸಂಖ್ಯೆ ಹಾಗೂ ಹಾವು ಕಡಿತ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ. ಹಿಂದೆ ಪೋಲಿಯೋ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದಂತೆಯೇ ಹಾವು ಕಡಿತದ ಬಗ್ಗೆಯೂ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.
ಹಾವು ಕಡಿತದ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ವರದಿಯಾಗದೇ ಇರುವುದರಿಂದ ಹಾವು ಕಡಿತದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ವಿಶ್ವಾದ್ಯಂತ ಒಂದು ವರ್ಷದಲ್ಲಿ 81,000ದಿಂದ 1.38 ಲಕ್ಷ ಜನರು ಹಾವು ಕಚ್ಚಿ ಸಾವನ್ನಪ್ಪುತ್ತಿದ್ದಾರೆ. ಆಫ್ರಿಕಾ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ.