ಬೆಂಗಳೂರು: ಸಿದ್ದರಾಮಯ್ಯ ನಂತಹ ನೀಚ ಮುಖ್ಯಮಂತ್ರಿಯನ್ನು ಬೆಳೆಸಿ ನಾನು ಜೀವನದಲ್ಲಿ ಮಹಾ ಅಪರಾಧವನ್ನು ಮಾಡಿದೆ. ಸಿದ್ದರಾಮಯ್ಯನವರನ್ನು ಬೆಳೆಸಿದ್ದಕ್ಕೆ ನಾನು ಅಂದಿನ 5 ಕೋಟಿ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಹೇಳಿದ್ದಾರೆ.
ಕೆಂಗೇರಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಿಮ್ಮ ಅಧಿಕಾರ ಎಷ್ಟು ದಿವಸ ಇರುತ್ತೆ ಅಂತ ನಾನು ನೋಡ್ತೀನಿ. ನೀವು ಏನೇನು ಮಾಡಿದ್ದೀರಾ ಎಂಬುವುದನ್ನು ಅಂಕಿ ಅಂಶ ಸಮೇತ ಕೊಟ್ಟು ಮಾತನಾಡುತ್ತೇನೆ. ಖಜಾನೆಯನ್ನು ಲೂಟಿ ಮಾಡ್ತಾ ಇದ್ದೀರಿ. ಇನ್ನೇನು ನಿಮ್ಮ ಟೈಂ ಮುಗೀತಾ ಬಂತು. ನಿಮಗೆ ಕೇವಲ 120 ದಿನಗಳು ಮಾತ್ರ ಉಳಿದಿದೆ ಎಂದು ಸಿದ್ದರಾಮಯ್ಯನವರಿಗೆ ಎಚ್ಚರಿಕೆ ನೀಡಿದರು.
ಈ ರಾಜ್ಯದಲ್ಲಿ ಏನೂ ನೀವು ಒಬ್ಬರೇ ದೊಡ್ಡ ಸತ್ಯವಂತರ ಸಿದ್ದರಾಮಯ್ಯನವರೇ? ಏನ್ ಇವರ ಮನೆ ಪಕ್ಕನೇ ಸತ್ಯ ಹರಿಶ್ಚಂದ್ರ ಹಾದು ಹೋಗುತ್ತಿದ್ದಾರೆ ವರ್ತಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯನವರನ್ನು ಮಾಜಿ ಪ್ರಧಾನಿ ಗೇಲಿ ಮಾಡಿದರು.
ಬೆಂಗಳೂರಿನ ಅಭಿವೃದ್ಧಿಗೆ ನಾನು ಸಹ ದುಡಿದಿದ್ದೇನೆ. ಮುಖ್ಯ ಮಂತ್ರಿಯಾಗಿ ಮತ್ತು ಪ್ರಧಾನ ಮಂತ್ರಿಯಾಗಿ ಮಾಡಿರುವ ಕೆಲಸಗಳ ಪಟ್ಟಿಯನ್ನು ಬಿಡಿ ಬಿಡಿಯಾಗಿ ವಿವರಿಸಿದ ದೇವೇಗೌಡರು, ಕಾವೇರಿ ನೀರು ತರಲು 1400 ಕೋಟಿ ರೂ. ಮತ್ತು ಕೃಷ್ಣ ನದಿಗೆ 1000 ಕೋಟಿ ರೂ. ಕೊಟ್ಟಿದ್ದೇನೆ. ವೀರಪ್ಪ ಮೊಯಿಲಿ ಅವರು ಬಿಟ್ಟು ಹೋಗಿದ್ದ 120 ಕೋಟಿ ರೂ. ಸಾಲವನ್ನು ತೀರಿಸಿದ್ದೇನೆ. ಬೆಂಗಳೂರಿನಲ್ಲಿ ಹೊರ ವರ್ತುಲ ರಸ್ತೆಗಳು, ಮೇಲ್ಸೇತುವೆಗಳು, ಐಟಿ-ಬಿಟಿಗೆ ನೆರವುಗಳನ್ನು ಕೊಟ್ಟಿದೇನೆ ಎಂದು ಹೇಳಿದರು.
ಈ ರಾಜ್ಯದಲ್ಲಿ ಮತ್ತು ದೇಶದಲ್ಲಿ ಯಾರಾದರೂ ಒಬ್ಬ ಸಾಮಾಜಿಕ ನ್ಯಾಯ ಒದಗಿಸಿದ್ದರೇ ಅದು ನಿಮ್ಮ ದೇವೇಗೌಡ ಮಾತ್ರ. ಎಲ್ಲರಿಗೂ ನ್ಯಾಯ ಒದಗಿಸಬೇಕೆಂದು ಹಗಲಿರುಳು ದುಡಿದೆ. ದಯಮಾಡಿ ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ, ಈ ಬಾರಿ ನಿಮ್ಮ ಮನೆ ಮಗ ಜವರೇ ಗೌಡನನ್ನು ಗೆಲ್ಲಿಸಿ ಕೊಡಿ ಮತ್ತು ಕುಮಾರಣ್ಣನಿಗೆ ಶಕ್ತಿ ತುಂಬಿ ಎಂದು ಸಮಾವೇಶದಲ್ಲಿ ನೆರೆದವರ ಮುಂದೆ ಕೈ ಮುಗಿದು ಮನವಿ ಮಾಡಿಕೊಂಡರು.
ಸಿದ್ದರಾಮಯ್ಯ ನಂತವರ ಕೀಳು ಮಟ್ಟದ ರಾಜಕಾರಣಿಯನ್ನು ಎಲ್ಲೂ ನೋಡಿಲ್ಲ. ಈ ಹಿಂದೆ ರಾಜ್ಯದ ಜನರ ಮನ ಗೆಲ್ಲುವ ಸಂದರ್ಭದಲ್ಲಿ ನಿಮಗೆ ಈ ದೇವೇಗೌಡ ಬೇಕಾಗಿದ್ದ. ಈಗ ಮುಖ್ಯಮಂತ್ರಿಯಾದ ಬಳಿಕ ಶ್ರವಣಬೆಳಗೊಳದ ಕಾರ್ಯಕ್ರಮದಲ್ಲಿ ನನಗೇ ಮಾತನಾಡುವುದಕ್ಕೆ ಅವಕಾಶವೇ ಕೊಡಲಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ಈಗ ಸೋನಿಯಾ ಗಾಂಧಿಯವರ ಬಲ ಕುಗ್ಗಿ ಹೋಗಿದೆ. ಇದನ್ನೇ ನೆಪ ಮಾಡಿಕೊಂಡು ಇವತ್ತು ಕಾಂಗ್ರೆಸ್ನಲ್ಲಿ ಸಿಎಂ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಯಾವ ಶಕ್ತಿ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕುಳ್ಳಿಸಿತ್ತೋ. ಅದೇ ಶಕ್ತಿ ಇಂದು ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಎಸೆಯಲು ಪ್ರಯತ್ನಿಸುತ್ತಿದೆ. ನಿಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿಯೇ ತೀರೋದು ಎಂದು ಶಪಥ ಮಾಡಿದರು.
ಇದುವರೆಗೆ ಯಾರೂ ನನ್ನ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿಲ್ಲ ಅಂತಾ ಬೀಗುವ ನಿಮಗೆ ಅರ್ಕಾವತಿ ಕೆಂಪಣ್ಣ ಆಯೋಗ ಏನಾಯಿತು? ಇತರಹ ಸುಳ್ಳು ಹೇಳುವುದಕ್ಕೆ ನಾಚಿಕೆ ಆಗಲ್ವಾ ನಿಮಗೆ ಎಂದು ಪ್ರಶ್ನಿಸಿ ದೇವೇಗೌಡರು ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: ಎಚ್ಡಿಡಿಗೆ ವಿಭಿನ್ನವಾಗಿ ಜೈಕಾರ ಕೂಗಿದ ಅಭಿಮಾನಿ- ಮಾಜಿ ಪ್ರಧಾನಿ ಫುಲ್ ಖುಷ್