ಗದಗ: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮದಲ್ಲಿ ನಡೆದಿದೆ.
ಬಸಮ್ಮ ಬಳ್ಳಾರಿ ಅವರಿಗೆ ಸೇರಿದ ಗುಡಿಸಲಿಗೆ ಬೆಂಕಿ ತಗುಲಿದ್ದು, ಬೆಲೆ ಬಾಳುವ ವಸ್ತುಗಳು, ಬಟ್ಟೆ, ಚಿನ್ನಾಭರಣ, ನಗದು ಸೇರಿ 5 ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎನ್ನಲಾಗುತ್ತಿದೆ. ಗುರುವಾರ ಸಂಜೆ ಮನೆಯವರು ತೋಟಕ್ಕೆ ಹೋಗಿದ್ದ ಸಂದರ್ಭದಲ್ಲಿ ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಗ್ರಾಮಸ್ಥರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರಿಂದ ಅದು ಸಾಧ್ಯವಾಗಿಲ್ಲ. ಕೊನೆಗೆ ಅವರು ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆ ಪಕ್ಕದ ಮನೆಗಳಿಗೂ ತಗಲುವ ಸಾಧ್ಯತೆಗಳಿದ್ದರಿಂದ ಸೂಕ್ತ ಸಮಯಕ್ಕೆ ಬೆಂಕಿಯ ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಬಳ್ಳಾರಿ ಕುಟುಂಬದ ಯಜಮಾನನ ಸಾವಿನಿಂದಾಗಿ ಸಂಪ್ರದಾಯದಂತೆ ಮನೆ ತೊರೆದು ಗುಡಿಸಲಲ್ಲಿ ವಾಸವಾಗಿದ್ದರು. ಆದರೆ ಬೆಂಕಿ ಕೆನ್ನಾಲಿಗೆಗೆ ಗುಡಿಸಲು ಆಹುತಿಯಾಗಿದೆ. ಇದೀಗ ಲಕ್ಷಾಂತರ ರೂಪಾಯಿ ಹಾನಿಯಿಂದ ಮತ್ತೆ ಬಳ್ಳಾರಿ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ತಲುಪಿದೆ.
ಈ ಕುರಿತು ಗದಗ ಜಿಲ್ಲೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.