ಮಂಗಳೂರು: ಕರಾವಳಿಯಲ್ಲಿ ಮತ್ತೆ ಗಲಭೆಯಾಗಿದೆ. ಬಜಾಲ್ ಪರಿಸರದ ಪಕ್ಕಲಡ್ಕ ಎಂಬಲ್ಲಿ ವಾಲಿಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದೆ.
ಡಿವೈಎಫ್ಐ ವತಿಯಿಂದ ಭಾನುವಾರ ಸೀಮಿತ ತಂಡಗಳ ವಾಲಿಬಾಲ್ ಪಂದ್ಯ ನಡೆಯುತ್ತಿತ್ತು. ಸಂಜೆ ಹೊತ್ತಿಗೆ ಫೈನಲ್ ಪಂದ್ಯ ನಡೆಯುತ್ತಿದ್ದಾಗ ಒಮ್ಮಿಂದೊಮ್ಮೆಲೆ ಹೊಡೆದಾಟ ನಡೆದಿದೆ. ವಾಲಿಬಾಲ್ ನೋಡಲು ಬಂದಿದ್ದ ಗುಂಪಿನ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದೆ. ವಾಲಿಬಾಲ್ ತಂಡಕ್ಕೂ ಇದಕ್ಕೂ ಸಂಬಂಧವಿಲ್ಲ, ವೈಯಕ್ತಿಕ ದ್ವೇಷದಿಂದ ಈ ಹೊಡೆದಾಟ ನಡೆದಿದೆ ಎಂಬುವುದಾಗಿ ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ನಡೆದಿದ್ದ ಪ್ರಕರಣವೊಂದರ ಸಂಬಂಧ ಬಶೀರ್ ಎಂಬಾತನನ್ನು ಪ್ರಶ್ನಿಸಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ. ಹಿಂದು ಮತ್ತು ಮುಸ್ಲಿಂ ತಂಡಗಳೆರಡು ಬಳಿಕ ಕ್ರಿಕೆಟ್ ಬ್ಯಾಟ್ ಬೀಸುತ್ತಾ ಹೊಡೆದಾಡಿಕೊಂಡಿವೆ. ಎರಡೂ ತಂಡಗಳು ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಅಫ್ರಿದಿ ಮತ್ತು ಇಜಾಝ್ ಎಂಬವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಾಲಿಬಾಲ್ ನೋಡಲು ಬಂದಿದ್ದ ಎರಡು ವಾಹನಗಳ ಗ್ಲಾಸ್ ಒಡೆದು ಪುಡಿ ಮಾಡಲಾಗಿದೆ. ಕೊನೆಗೆ ಪೊಲೀಸ್, ಪೊಲೀಸ್ ಎನ್ನುವ ಮೂಲಕ ಗಲಭೆಕೋರರನ್ನು ಸ್ಥಳೀಯರು ಓಡಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
https://www.youtube.com/watch?v=ScG-YgXoc4c
https://www.youtube.com/watch?v=1FkPBbrrDh8&feature=youtu.be