ಶಿವಮೊಗ್ಗ: ಪ್ರೀತಿಸಿ ಮೋಸ ಹೋದ ಮಗಳಿಗೆ ನ್ಯಾಯ ಕೊಡಿಸಲು ಸಾಧ್ಯವಾಗದ ಕೊರಗಿನಲ್ಲಿ ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದಿದೆ.
ಮಲವಗೊಪ್ಪ ಗ್ರಾಮದ ನಿವಾಸಿ ದೇವಾನಾಯ್ಕ್ ಆತ್ಮಹತ್ಯೆ ಮಾಡಿಕೊಂಡ ತಂದೆ. ದೇವಾನಾಯ್ಕ್ ಅವರ ಮಗಳು ಶಿಲ್ಪಾ ತಮ್ಮದೇ ಬಡಾವಣೆಯ ಮಂಜಾ ನಾಯ್ಕ್ ಎಂಬಾತನನ್ನು ಪ್ರೀತಿಸಿದ್ದರು. ನಾಲ್ಕು ವರ್ಷ ಶಿಲ್ಪಾಳನ್ನ ಪ್ರೀತಿ ಮಾಡಿದ ಮಂಜ ಕೊನೆಗೆ ಮದುವೆ ಆಗುವುದಿಲ್ಲ ಎನ್ನತೊಡಗಿದ. ಈ ಬಗ್ಗೆ ಗ್ರಾಮಸ್ಥರು ಪಂಚಾಯ್ತಿ ಮಾಡಿ ಮಂಜನ ಮನೆಯವರನ್ನು ಮದುವೆಗೆ ಒಪ್ಪಿಸಿದ್ದರು.
ಆದರೆ, ಮಂಜ ಕಳೆದ ತಿಂಗಳು 24ರಂದು ಧರ್ಮಸ್ಥಳಕ್ಕೆ ಹೋಗಿ ಬೇರೆ ಯುವತಿ ಜೊತೆ ಮದುವೆ ಆಗಿದ್ದ. ಈ ಬಗ್ಗೆ ಶಿವಮೊಗ್ಗ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಂಜ ನಾಯ್ಕ್, ಆತನ ತಂದೆ ಹಾಗೂ ಇನ್ನಿತರರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.
ಇತ್ತೀಚೆಗೆ ಇವರೆಲ್ಲರೂ ಜಾಮೀನಿನ ಮೇಲೆ ಬಿಡುಗಡೆಯಾಗಿ ಊರಲ್ಲಿ ಅಡ್ಡಾಡಿಕೊಂಡಿದ್ದರು. ಹೀಗಾಗಿ ಮಗಳಿಗೆ ನ್ಯಾಯ ಸಿಗಲಿಲ್ಲ ಎಂದು ದೇವಾನಾಯ್ಕ್ ಕೊರಗುತ್ತಿದ್ದರು. ನಿನ್ನೆ ಸಂಜೆ ಗ್ರಾಮದ ಕೆಲವರು ಮಗಳಿಗೆ ನ್ಯಾಯ ಕೊಡಿಸದ ತಂದೆ ಎಂದು ಹೀಯಾಳಿಸಿದ್ದರು ಎನ್ನಲಾಗಿದೆ. ಇದರಿಂದ ತೀವ್ರವಾಗಿ ನೊಂದ ದೇವಾನಾಯ್ಕ್ ರಾತ್ರಿ ಮನೆಯ ಹಿತ್ತಲಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.