ಮಂಡ್ಯ: ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯೋದನ್ನ ತಪ್ಪಿಸಲು ಹೋಗಿ ಸರ್ಕಾರಿ ಬಸ್ ಹಳ್ಳಕ್ಕೆ ಇಳಿದಿದ್ದು, ಬಸ್ಸಿನೊಳಗಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಿಹಳ್ಳಿ ಸಮೀಪ ಈ ಘಟನೆ ನಡೆದಿದೆ. ಮೈಸೂರು ಡಿಪೋಗೆ ಸೇರಿದ ಸರ್ಕಾರಿ ಬಸ್, ಶ್ರೀರಂಗಪಟ್ಟಣದಿಂದ ಎಂ.ಶೆಟ್ಟಿಹಳ್ಳಿ ಮಾರ್ಗವಾಗಿ ಜನರನ್ನು ಕರೆದುಕೊಂಡು ಹೋಗುತ್ತಿತ್ತು. ಇನ್ನು ಇದೇ ಮಾರ್ಗದಲ್ಲಿ ಶಾಲಾ ವಾಹನವೂ ಕೂಡ ಬರುತ್ತಿತ್ತು.
ರಸ್ತೆ ಹಾಳಾಗಿರೋ ಹಿನ್ನೆಲೆಯಲ್ಲಿ ಎರಡು ವಾಹನ ಒಂದೇ ಬಾರಿಗೆ ಸಂಚಾರ ಮಾಡುವುದು ಕಷ್ಟವಾಗಿದೆ. ಇದರಿಂದ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆಯೋದನ್ನ ತಪ್ಪಿಸೋದಕ್ಕೆ ಹೋಗಿ ಸರ್ಕಾರಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಪರಿಣಾಮ ಜಮೀನಿನ ಪಕ್ಕದಲ್ಲಿರುವ ಹಳ್ಳದೊಳಗೆ ಇಳಿದಿದೆ.
ಈ ವೇಳೆ ಬಸಿನೊಳಗಿದ್ದ ಮಕ್ಕಳು ಸೇರಿದಂತೆ ಸುಮಾರು 26 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ರಸ್ತೆ ಕಿರಿದಾಗಿದ್ದು, ದುರಸ್ತಿಯಾಗದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಿದರು.