ಕೊಪ್ಪಳ: ಓದಬೇಕೆನ್ನುವ ಹಂಬಲದಿಂದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಯುವಕನಿಗೆ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಸೇರಲು ಬಡತನ ಅಡ್ಡಿಯಾಗಿದೆ. ಇದ್ದೊಬ್ಬ ಮಗನಿಗೆ ಬಡತನದಲ್ಲಿಯೂ ತಾಯಿ ಕಷ್ಟಪಟ್ಟು ಓದಿಸ್ತಾಯಿದ್ದಾರೆ. ಆದ್ರೀಗ ಎಂಜಿನಿಯರಿಂಗ್ ಓದೋ ಆಸೆಗೆ ಹಣಕಾಸಿನ ತೊಂದ್ರೆ ಆಗಿದೆ. ಸದ್ಯ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ನೆರವಿಗೆ ಬಂದಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಮುಷ್ಟೂರ ಗ್ರಾಮದ ಮಲ್ಲಯ್ಯ ಹಾಗೂ ನಾಗಮ್ಮ ದಂಪತಿಯ ಪುತ್ರ ಮಂಜುನಾಥ್ ಬಡತನದಿಂದಾಗಿ ಶಿಕ್ಷಣವನ್ನು ಬಿಡುವ ಹಂತ ತಲುಪಿದ್ದಾರೆ. ಮಂಜುನಾಥ್ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ಸಾವನ್ನಪ್ಪಿದ್ರು. ಇದ್ದೊಬ್ಬ ತಾಯಿಯನ್ನ ಸಾಕೋ ಜವಾಬ್ದಾರಿ ಈತನ ಹೆಗಲಿಗೆ ಬಿದ್ದಿದೆ. ಜೊತೆಗೆ ತಾಯಿಯ ಪ್ರೋತ್ಸಾಹದಿಂದ ತನ್ನ ಓದಿಗೆ ಬ್ರೇಕ್ ಹಾಕದೇ ಕೂಲಿ ನಾಲಿ ಮಾಡಿ ಸಂಸಾರದ ನೊಗ ನೂಕ್ತಾ ತನ್ನ ಓದನ್ನ ಮುಂದುವರೆಸಿದ್ದಾರೆ. ಯಾವುದೇ ಟ್ಯೂಷನ್ಗೆ ಹೋಗ್ದೆ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇಕಡಾ 82.5 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ.
ನೀಟ್ ಪರೀಕ್ಷೆಯಲ್ಲಿ 40 ಸಾವಿರ ಸ್ಥಾನ ಪಡೆದುಕೊಂಡಿದ್ದಾರೆ. ಮಂಜುನಾಥ್ ನೀಟ್ ಪರೀಕ್ಷೆಗಾಗಿ ಯಾವುದೇ ಟ್ಯೂಷಿನ್ಗೆ ಹೋಗಿಲ್ಲ ಅನ್ನೋದು ಇನ್ನೊಂದು ವಿಶೇಷ. ಇವರಿಗೆ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿಕೊಳ್ಳೋ ಆಸೆಯಿದೆ. ಆದ್ರೆ ಮುಂದಿನ ಓದಿಗೆ ಇವರ ಬಳಿ ಹಣವಿಲ್ಲ.
ನಿತ್ಯ ಬೆಳಿಗ್ಗೆ ಕಾಲೇಜು ಮುಗಿಸಿ ಆ ಬಳಿಕ ಕೂಲಿ ಮಾಡಿದ್ದಾರೆ. ಜೊತೆಗೆ ಮಗನಿಗೆ ಸಾಥ್ ನೀಡೋಕೆ ತಾಯಿ ನಾಗಮ್ಮ ಕೂಡಾ ಕೂಲಿ ಮಾಡ್ತಿದ್ದಾರೆ. ಇನ್ನು ಮಂಜುನಾಥ್ ಪ್ರತಿಭಾವಂತ ವಿದ್ಯಾರ್ಥಿ. ಎಸ್ಎಸ್ಎಲ್ಸಿ ಯಲ್ಲಿ ಶೇಕಡಾ 70.40 ರಷ್ಟು ಅಂಕ ಗಳಿಸಿದ್ದಾರೆ. ಗಂಗಾವತಿ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.
ಬಡತನದಲ್ಲೂ ಮಂಜುನಾಥ ಪಿಯುಸಿ ವಿಜ್ಞಾನದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿರೋದಕ್ಕೆ ಗ್ರಾಮಸ್ಥರು ಅಭಿನಂದಿಸಿದ್ದಾರೆ. ಮುಂದಿನ ಓದಿಗೆ ಸಹಾಯ ಹಸ್ತ ಚಾಚೋಕೆ ದಾನಿಗಳು ಮುಂದೆ ಬರಬೇಕಿದೆ.