ಗಾಂಧಿನಗರ: 22 ವರ್ಷಗಳಿಂದ ನಿರಂತರವಾಗಿ ಗುಜರಾತ್ ನ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಗೆ ಅಧಿಕಾರದ ಗದ್ದುಗೆ ಗಟ್ಟಿಯಾಗುತ್ತಾ? ಅಥವಾ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಗೆ ಗುಜರಾತ್ ನಲ್ಲೇ ಗೆಲುವಿನ ಆಕ್ಸಿಜನ್ ಸಿಗುತ್ತಾ ಎಂಬ ಪ್ರಶ್ನೆಗೆ ಸೋಮವಾರ ಅಧಿಕೃತ ಉತ್ತರ ಸಿಗಲಿದೆ.
ಗುಜರಾತ್ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಗೆ ನಿಶ್ಚಿತ ಬಹುಮತ ಸಿಗುತ್ತದೆ ಎಂದು ಹೇಳಿವೆ. ಇದರಿಂದ ಬಿಜೆಪಿ ಪಾಳಯದಲ್ಲಿ ಈಗಾಗಲೇ ಗೆಲುವಿನ ನಗೆ ಮೂಡಿದೆ. ಕಾಂಗ್ರೆಸ್ ಈ ಮತದಾನೋತ್ತರ ಸಮೀಕ್ಷೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಗುಜರಾತ್ ನ ಜನ ಬದಲಾವಣೆಗಾಗಿ ಈ ಬಾರಿ ಮತ ಚಲಾಯಿಸಿರುವುದು ಸ್ಪಷ್ಟ. ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ಆಶಾಭಾವನೆ ಹೊಂದಿದೆ.
ನಿರಂತರ ಆಡಳಿತದ ಪರಿಣಾಮ ಎದ್ದಿರುವ ಆಡಳಿತ ವಿರೋಧಿ ಅಲೆ, ಪಾಟೀದಾರ್ ಸಮುದಾಯದ ಹೋರಾಟದ ಬಿಸಿ, ದಲಿತ ಮತ್ತು ಹಿಂದುಳಿದ ವರ್ಗಗಳ ಯುವ ನಾಯಕರ ಸವಾಲು, ಜಿಎಸ್ ಟಿ ಮತ್ತು ನೋಟ್ ಬ್ಯಾನ್ ನ ಎಫೆಕ್ಟ್ ನ ನಡುವೆಯೂ ಇಲ್ಲಿ ಬಿಜೆಪಿ ಗೆದ್ದರೆ ಅದು ಬಿಜೆಪಿ ಪಾಲಿಗೆ ದಿಗ್ವಿಜಯ. ಒಂದು ವೇಳೆ ಬಿಜೆಪಿ ಸೋತರೆ ಬಿಜೆಪಿಗಿಂತಲೂ ಅದು ಮೋದಿ – ಅಮಿತ್ ಶಾ ಜೋಡಿಗೆ ಆಗುವ ದೊಡ್ಡ ಮುಖಭಂಗ.
ಕಾಂಗ್ರೆಸ್ ಇಲ್ಲಿ ಗೆದ್ದರೆ ಅದು ದೇಶದ ಕಾಂಗ್ರೆಸ್ ಪಾಲಿಗೆ ಹೊಸ ಚೈತನ್ಯ ತುಂಬಿ ಹಳೆಯ ಸಾಲು ಸಾಲು ಸೋಲುಗಳ ಕಹಿಯನ್ನು ಒಂದೇ ಏಟಿಗೆ ಮರೆಸಲಿದೆ. ಒಂದು ವೇಳೆ ಕಾಂಗ್ರೆಸ್ ಇಲ್ಲಿಯೂ ಸೋತರೆ ಶನಿವಾರ ತಾನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಪಟ್ಟಾಭಿಷೇಕ ಮಾಡಿಸಿಕೊಂಡಿರುವ ರಾಹುಲ್ ಗಾಂಧಿ ಯ ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಆಗಲಿದೆ. ಇದನ್ನೂ ಓದಿ: ಸರಳ ಬಹುಮತವೂ ಸಿಗಲ್ಲ, ಗುಜರಾತ್ನಲ್ಲಿ ನಮಗೆ ಸೋಲಾಗಲಿದೆ: ಬಿಜೆಪಿ ರಾಜ್ಯಸಭಾ ಸದಸ್ಯ
ರಾಜಕೀಯ ಲೆಕ್ಕಚಾರಗಳು ಏನೇ ಇರಲಿ. ಆದರೆ, ಗುಜರಾತ್ ಚುನಾವಣೆ ಒಂದು ರಾಜ್ಯದ ಚುನಾವಣೆ ಆಗದೇ ಇದು ದೇಶದ ಚುನಾವಣೆ ಎನ್ನಿಸಿಕೊಂಡಿರುವುದು ಗಾಂಧಿ ನಾಡಿನ ಮತದಾರರಲ್ಲೆ ಅಚ್ಚರಿ ಮತ್ತು ಹೆಮ್ಮೆ ಎರಡು ಮೂಡಿಸಿದೆ. ಇದನ್ನೂ ಓದಿ: ಗುಜರಾತ್, ಹಿಮಾಚಲದಲ್ಲಿ ಮೋದಿ, ಶಾ ಮುಂದೆ ಕಾಂಗ್ರೆಸ್ ಧೂಳೀಪಟ: ಟುಡೇಸ್ ಚಾಣಕ್ಯ