ದಾವಣಗೆರೆ/ ತುಮಕೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯಕ್ಕೆ ಭೇಟಿ ನೀಡಿರೋ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ದಾವಣಗೆರೆ ಹಾಗೂ ತುಮಕೂರು ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ.
ದಾವಣಗೆರೆ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡಿದ್ದ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಬೆಳಗ್ಗೆ 4 ಜಿಲ್ಲೆಗಳ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸುತ್ತಿದ್ದಾರೆ. ನಂತರ ಅಸಂಘಟಿತ ಕಾರ್ಮಿಕರ ಜೊತೆ ಸಂವಾದ ಏರ್ಪಡಿಸಲಾಗಿದ್ದು, ತದನಂತರ ಕಾರ್ಮಿಕ ಸಮಸ್ಯೆಗಳ ಬಗ್ಗೆ ಕುರಿತು ಚರ್ಚೆ ನಡೆಸಲಿದ್ದಾರೆ.
10.30ಕ್ಕೆ ದಾವಣಗೆರೆ ಬಿಐಇಟಿ ಕಾಲೇಜ್ ಸಭಾಂಗಣದಲ್ಲಿ ವರ್ತಕರು ವ್ಯಾಪಾರಿಗಳ ಜೊತೆ ಜಿ ಎಸ್ ಟಿ, ನೋಟ್ ಬ್ಯಾನ್ ಎಫೆಕ್ಟ್ ಕುರಿತ ಸಂವಾದ ಕಾರ್ಯಕ್ರಮವಿದ್ದು, ನಂತರ 11 ಕ್ಕೆ ಹೊಳೆಲ್ಕೆರೆ ಪಯಣ, ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಕ್ಷೇತ್ರದಲ್ಲಿ ರಾಹುಲ್ ಸಂಚಾರ ಮಾಡಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಮಧ್ಯಾಹ್ನ 2.30 ಕ್ಕೆ ತುಮಕೂರು ವಿಶ್ವವಿದ್ಯಾಲಯದ ಹೆಲಿಪ್ಯಾಡ್ಗೆ ಬಂದು ಇಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ರಸ್ತೆ ಮಾರ್ಗದ ಮೂಲಕ ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯಲಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ಶ್ರೀಗಳೊಂದಿಗೆ ಕುಶಲೋಪರಿ ನಡೆಸಲಿದ್ದಾರೆ. ಬಳಿಕ ಕ್ಯಾತಸಂದ್ರ ಸರ್ಕಲ್ ನಲ್ಲಿ ಸಾರ್ವಜನಿರನ್ನು ಉದ್ದೇಶಿಸಿ ಐದು ನಿಮಿಷಗಳ ಕಾಲ ಮಾತನಾಡಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಅಲ್ಲಿಂದ ನೇರವಾಗಿ ಬಿಎಚ್ ರಸ್ತೆ ಮಾರ್ಗವಾಗಿ ವಿಶೇಷ ಬಸ್ ಮೂಲಕ ರೋಡ್ ಶೋ ಸಾಗಿ ಟೌನ್ ಹಾಲ್ ಸರ್ಕಲ್ ನಲ್ಲಿ 10 ನಿಮಿಷ ಭಾಷಣ ಮಾಡಲಿದ್ದಾರೆ. ನಂತರ ಕುಣಿಗಲ್ನತ್ತ ಪ್ರಯಾಣ ಬೆಳೆಸಲಿದ್ದಾರೆ. ದಾರಿ ಮಧ್ಯೆ ಗೂಳುರು, ನಾಗವಲ್ಲಿ ಹೆಬ್ಬೂರು ಕುಣಿಗಲ್ನಲ್ಲಿ ನಿಂತು ಐದೈದು ನಿಮಿಷ ಭಾಷಣ ಮಾಡಲಿದ್ದಾರೆ, ಬಳಿಕ ಕುಣಿಗಲ್ ಮೂಲಕ ಮಾಗಡಿಯತ್ತ ಹೊರಡಲಿದ್ದಾರೆ ಎನ್ನಲಾಗಿದೆ.