ಉಡುಪಿ: ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಅನಿಲ್ ಪೂಜಾರಿ ಎಂಬವರಿಗೆ ಭಜರಂಗ ದಳದ ಐವರು ತಲ್ವಾರ್ ದಾಳಿ ನಡೆಸಿರುವ ಪ್ರಕರಣಕಕ್ಕೆ ಸಂಬಂಧಿಸಿದಂತೆ ಮೂವರ ಬಂಧನವಾಗಿದೆ.
ಅನಿಲ್ ಪೂಜಾರಿ ಎಂಬವರಿಗೆ, ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಸುನಿಲ್, ಸುಧೀರ್, ಶರತ್, ಪ್ರಸಾದ್, ಜಗದೀಶ್ ಎಂಬವರು ಅನಿಲ್ ಪೂಜಾರಿ ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಘಟನೆ ಬಳಿಕ ಮನೆಗೆ ನುಗ್ಗಿ ತಲವಾರಿನಿಂದ ಹಲ್ಲೆ ನಡೆಸಿದ ಭಜರಂಗದಳದವರು ಮಾರಕಾಸ್ತ್ರ ಹಿಡಿದು ದಾಂಧಲೆ ನಡೆಸಿರುತ್ತಾರೆ ಎಂದು ಅನಿಲ್ ಪೂಜಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಘಟನೆಯಲ್ಲಿ ಅನಿಲ್ ಅವರ ತಲೆ ಹಾಗೂ ಮುಖದ ಭಾಗಕ್ಕೆ ಗಾಯವಾಗಿತ್ತು, ತಕ್ಷಣವೇ ಅವರನ್ನು ಸ್ಥಳೀಯರು ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅನಿಲ್ ಅವರಿಗೆ ಹಲ್ಲೆ ನಡೆಸುವ ಸಂದರ್ಭ ಅಡ್ಡ ಬಂದ ಅವರ ತಾಯಿಯೂ ಗಾಯಗೊಂಡಿದ್ದೂ ಅವರಿಗೂ ಚಿಕಿತ್ಸೆಕೊಡಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.
ಈ ಯುವಕರೆಲ್ಲಾ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು. ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪ ಬಂದು ಹಲ್ಲೆ ನಡೆಸುವಲ್ಲಿಗೆ ಬಂದು ತಲುಪಿದೆ. ಇದೀಗ ಇತ್ತಂಡಗಳೂ ಪ್ರತಿಷ್ಠೆಗಾಗಿ ಪರಸ್ಪರ ಸೆಣಸಾಡಲು ಮುಂದಾಗಿದೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ಕಾರ್ಕಳದ ಆನೆಕೆರೆಯಲ್ಲಿ ವಿಭಿನ್ನ ಕೋವಿನ ಜೋಡಿ ಬಗ್ಗೆ ಅನಿಲ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯುವಕನನ್ನು ಹಿಡಿದು ನಾವು ಪೊಲೀಸರ ವಶಕ್ಕೆ ನೀಡಿದ್ದು ಎಂದು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರೆ, ಭಜರಂಗದಳದವರು ಅದು ನಮ್ಮಿಂದಾದ ಕಾರ್ಯವೆಂದು ಹರಿಯಬಿಟ್ಟಿದ್ದಾರೆ. ಇದು ಇತ್ತಂಡಗಳಿಗೆ ಪ್ರತಿಷ್ಠೆಯ ವಿಚಾರವಾಗಿದ್ದು, ಹಲ್ಲೆಗೆ ಮೂಲ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದೀಗ ಸುನೀಲ್ ನಿಟ್ಟೆ, ಪ್ರಸಾದ್, ಶರತ್ ಎಂಬ ಮೂವರನ್ನು ಬಂಧಿಸಲಾಗಿದೆ. ಇಬ್ಬರು ಪ್ರಮುಖ ಆರೋಪಿಗಳಿಗೆ ಪೊಲೀಸರು ಬಲೆಬೀಸಿದ್ದಾರೆ.