– ಚಾಲಕಿ ಕಳ್ಳಿಗೆ ಗೆಳೆಯನ ಸಾಥ್
– ಐಷಾರಾಮಿ ಜೀವನದ ಕನಸು ಕಂಡವರು ಜೈಲು ಪಾಲು
ಬೆಂಗಳೂರು: ಒಂದೇ ಮನೆಯಲ್ಲಿ ಒಂದು ಕೆ.ಜಿ ಚಿನ್ನಾಭರಣ ಕದ್ದು ತಲೆಮರೆಸಿಕೊಂಡಿದ್ದ ಖತರ್ನಾಕ್ ಕಳ್ಳರ ಟೀಂ ಮಾರತಹಳ್ಳಿ ಪೊಲೀಸ್ರ ಬಲೆಗೆ ಬಿದ್ದಿದ್ದಾರೆ.
ಸುನೈನ, ಮೀನ್ ಹಾಜುದ್ದಿನ್, ಚಂದನ್ ಕುಮಾರ್ ಬಂಧಿತ ಆರೋಪಿಗಳು. ಆರೋಪಿಗಳು ಅಸ್ಸಾಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿ ಸುನೈನ ನಿತಿನ್ ಎಂಬವರ ಮನೆಯಲ್ಲಿ ಕೆಲಸಕ್ಕೆ ಹೋಗುತಿದ್ದಳು.
ಆರೋಪಿ ಮನೆಯಲ್ಲಿರೋ ಬೆಲೆಬಾಳುವ ವಸ್ತುಗಳನ್ನ ಗಮನದಲ್ಲಿಟ್ಟುಕೊಂಡು ಬೆಡ್ ರೂಂನಲ್ಲಿರೋ ಲಾಕರ್ ಕೀ ಎಗ್ಗರಿಸಿರುತ್ತಾಳೆ. ಕದ್ದ ಲಾಕರ್ ಕೀಯನ್ನ ತನ್ನ ಸ್ನೇಹಿತ ಮೀನಾಹಾಜುದ್ದಿನ್ ಗೆ ಕೊಟ್ಟು ಕಳ್ಳತನ ಮಾಡಿಕೊಂಡು ಬರುವಂತೆ ಹೇಳಿದ್ದಾಳೆ. ಅದರಂತೆ ಆರೋಪಿ ಮೀನಾಹಾಜುದ್ದಿನ್ ಲಾಕರ್ ಒಪನ್ ಮಾಡಿ ಮನೆಯಲ್ಲಿರೋ 50 ಲಕ್ಷ ರೂ. ಬೆಲೆಬಾಳುವ ಒಂದು ಕೆ.ಜಿ ಚಿನ್ನಾಭರಣ ಹಾಗೂ ಬೆಳ್ಳಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.
ಕಳ್ಳತನದ ಬಗ್ಗೆ ಮನೆ ಮಾಲೀಕ ನಿತಿನ್ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಮನೆ ಕಳ್ಳತನದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ವಿಶೇಷ ತಂಡವನ್ನ ಮಾಡಿ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ತನಿಖೆಗೆ ಒಳಪಡಿಸಿದಾಗ ಕಳ್ಳತನದ ಸೂತ್ರ ದಾರಿ ಯಾರು ಅನ್ನೋದು ತಿಳಿದು ಬಂದಿದೆ. ಆರೋಪಿತೆ ರಾತ್ರೋ ರಾತ್ರಿ ಶ್ರೀಮಂತೆ ಆಗಿ ಐಷಾರಾಮಿ ಜೀವನ ನಡೆಸಲು ಸ್ನೇಹಿತನ ಸಹಾಯದಿಂದ ಕಳ್ಳತನ ಮಾಡಿಸಿದ್ಲು ಅನ್ನೋ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.
ಆರೋಪಿ ಕದ್ದ ಚಿನ್ನಾಭರಣವನ್ನ ಬೆಂಗಳೂರು ಮತ್ತು ಅಸ್ಸಾಂ ರಾಜ್ಯದಲ್ಲಿ ಮಾರಾಟ ಮಾಡಿಕೊಂಡಿದ್ರು. ಪೊಲೀಸ್ರು ಆರೋಪಿಗಳು ಕಳ್ಳತನ ಮಾಡಿದ್ದ ಒಂದು ಕೆ.ಜಿ ಚಿನ್ನಾಭರಣ ಬೆಳ್ಳಿ , 50 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.