ಚಿಕ್ಕಬಳ್ಳಾಪುರ: ರಾತ್ರೋ ರಾತ್ರಿ ಕುರಿಗಳ ಶೆಡ್ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿದ್ದು, 15 ಕುರಿಗಳು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದಿನ್ನೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ರೈತ ರಂಗಾರೆಡ್ಡಿ ಕುರಿಗಳನ್ನು ಸಾಕಿದ್ದರು. ಆದರೆ ಕಳೆದ ರಾತ್ರಿ ಕುರಿ ಶೆಡ್ ಒಳಗೆ ನುಗ್ಗಿರುವ ನಾಯಿಗಳು 15 ಕುರಿಗಳನ್ನ ಬಲಿ ಪಡೆದಿವೆ. 40 ಕುರಿಗಳಿದ್ದು, ಅದರಲ್ಲಿ 15 ಕುರಿಗಳು ಸಾವನ್ನಪ್ಪಿವೆ.
ರಾತ್ರಿ ಎಂದಿನಂತೆ ಕುರಿಗಳ ಶೆಡ್ಗೆ ಬೀಗ ಹಾಕಿ ಮನೆಗೆ ಹೋದ ಮಾಲೀಕ ರಂಗಾರೆಡ್ಡಿ ಬೆಳಿಗ್ಗೆ ಎದ್ದು ನೋಡಿದರೆ ಕುರಿಗಳು ಸಾವನ್ನಪ್ಪಿರೋದು ಕಂಡುಬಂದಿದೆ. ಬಾಡಿಗೆ ಮನೆಯಲ್ಲಿ ವಾಸವಾಗಿ, ಬಾಡಿಗೆ ಜಾಗದಲ್ಲಿ ಸಾಲ ಮಾಡಿ ಕುರಿಗಳ ಶೆಡ್ ಮಾಡಿದ್ದರು. ಈಗ ನಾಯಿಗಳ ದಾಳಿಯಿಂದ 15 ಕುರಿಗಳ ಸಾವನ್ನಪ್ಪಿರುವುದರಿಂದ ಸರಿ ಸುಮಾರು 3 ಲಕ್ಷ ರೂಪಾಯಿ ನಷ್ಟ ಆಗಿದೆ. ರೈತ ರಂಗಾರೆಡ್ಡಿ ಕಣ್ಣೀರು ಹಾಕಿಕೊಂಡು ಅಳಲು ತೋಡಿಕೊಂಡಿದ್ದಾರೆ.