ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪರನ್ನು ನೆನೆದು ಎಂ.ಪಿ ರೇಣುಕಾಚಾರ್ಯ ಭಾವುಕರಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ನಗರದ ಸಾಮರ್ಥ್ಯ ಸೌಧದಲ್ಲಿ ಸಭೆಯೊಂದರಲ್ಲಿ ಯಡಿಯೂರಪ್ಪ ಸಾಧನೆಯನ್ನು ಶಾಸಕರು ಕೊಂಡಾಡಿದರು.
ಅತಿವೃಷ್ಟಿಯಿಂದಾದ ಹಾನಿಯ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಅವಳಿ ತಾಲೂಕಿಗೆ ಯಡಿಯೂರಪ್ಪ ನೀಡಿದ ಕೊಡುಗೆ ನೆನೆಪು ಮಾಡಿಕೊಂಡರು. ಯಡಿಯೂರಪ್ಪನವರು ಅವಳಿ ತಾಲೂಕುಗಳ ಅಭಿವೃದ್ಧಿಗೆ ಸಾವಿರಾರು ಕೋಟಿ ನೀಡಿದ್ದಾರೆ. ಅವರು ನೀಡಿದ ಕೊಡುಗೆಯನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲಾ ಎಂದು ಹೇಳುತ್ತಾ ರೇಣುಕಾಚಾರ್ಯ ಗದ್ಗದಿತರಾದರು.
ಯಡಿಯೂರಪ್ಪನವರ ಗರಡಿಯಲ್ಲಿ ನಾನು ಬಸವರಾಜ್ ಬೊಮ್ಮಯಿ ಸೇರಿದಂತೆ ಹಲವರು ಶಾಸಕರು ಬೆಳೆದು ಬಂದಿದ್ದೇವೆ ಎಂದು ಇದೇ ವೇಳೆ ಶಾಸಕರು ತಿಳಿಸಿದರು.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶಾಸಕರು, ದಾವಣಗೆರೆ ಮಧ್ಯಕರ್ನಾಟಕದ ಜಿಲ್ಲೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಐವರು ಶಾಸಕರು ಮನವಿ ಮಾಡಿದ್ದೇವೆ. ಯಾರಿಗೆ ಒಲಿಯುತ್ತೆ ಅದೃಷ್ಟ ಅನ್ನೋದು ಗೊತ್ತಿಲ್ಲ. ನಾನು ಒಂದು ಬಾರಿ ಸಚಿವ ಹಾಗೂ ಎರಡು ನಿಗಮಗಳಲ್ಲಿ ಕೆಲಸ ಮಾಡಿದ ಅನುಭವ ಇದ್ದು, ನನಗೆ ಸಚಿವ ಸ್ಥಾನ ಕೊಟ್ಟರೆ ಯಶಸ್ವಿಯಾಗಿ ನಿಭಾಯಿಸುತ್ತೇನೆ. ಅದಕ್ಕೆ ನಾನು ಸಮರ್ಥಿನಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಯಾರು ಜನರ ಜೊತೆಗಿರುತ್ತಾರೋ ಜನರಿಗೆ ಸುಲಭವಾಗಿ ಸಿಗುತ್ತಾರೆ ಅಂತವರಿಗೆ ಬಿಜೆಪಿ ಪಕ್ಷ ಅವಕಾಶ ಕೊಡುತ್ತೆ. ಮೊನ್ನೆ ದೆಹಲಿಗೆ ಹೋದಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೇಂದ್ರ ಸಚಿವರಿಗೆ ನನ್ನ ಕೆಲಸದ ಮೂಲಕ ನನ್ನನ್ನು ಪರಿಚಯಿಸಿದ್ದಾರೆ. ಅರುಣ್ ಸಿಂಗ್ ಅವರು ನಾನು ಕೋವಿಡ್ ಸಂದರ್ಭದಲ್ಲಿ ಮಾಡಿರುವ ಕೆಲಸವನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸ ಇದ್ದು, ಸಿಎಂ ಹಾಗೂ ವರಿಷ್ಠರಿಗೆ ಪರಮಾಧಿಕಾರ ಇದೆ ಕಾದು ನೋಡಿ ಎಂದು ಹೇಳಿದ್ದರು.