– ನನ್ನ ಹೆಸರಿನಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದೆ
ಉಡುಪಿ: ಶನಿವಾರ ನಾಗರ ಪಂಚಮಿ ಹಬ್ಬ. ಉಡುಪಿ ಜಿಲ್ಲೆಯಲ್ಲಿ ಸಾಮೂಹಿಕ ನಾಗರಪಂಚಮಿಗೆ ಜಿಲ್ಲೆಯಲ್ಲಿ ಅವಕಾಶ ಇಲ್ಲ. ನಾಗಾರಾಧನೆ ಪೂಜೆ ಮಾಡಬಾರದು ಎಂದು ನಾನು ಹೇಳಿಲ್ಲ. ಮನೆಗಳಲ್ಲಿ ನಾಗಾರಾಧನೆ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಹೆಸರಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಮಾಡುತ್ತಿದ್ದಾರೆ. ಅಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಉಡುಪಿಯಲ್ಲಿ ನಾಗಪೂಜೆಗೆ ಅವಕಾಶ ಇಲ್ಲವೆಂಬ ಯಾರೂ ಸಂದೇಶ ರವಾನೆ ಮಾಡಬೇಡಿ ಎಂದರು.
- Advertisement 2
- Advertisement 3
ಕೊರೊನಾ ಕಾಲದಲ್ಲಿ ಯಾವುದೇ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಮಾಡಬಾರದು. ಅವರವರ ಮನೆಯಲ್ಲಿ ನಾಗನ ಕಲ್ಲಿಗೆ ಹಾಲು ಎರೆಯಲು ಅಡ್ಡಿಯಿಲ್ಲ. ಮನೆಯಲ್ಲಿ ಆಚರಣೆ ಮಾಡಲು ಯಾರ ಅನುಮತಿಯ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಸಾರ್ವಜನಿಕರು ಒಟ್ಟಿಗೆ ಸೇರಿ ಆಚರಣೆ ಮಾಡಲು ಅವಕಾಶ ಇಲ್ಲ. ಎಲ್ಲರಿಗೂ ನಾಗರಪಂಚಮಿ ಶುಭಾಶಯ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಶುಭ ಹಾರೈಸಿದ್ದಾರೆ.