ನವದೆಹಲಿ: ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮತ್ತು ಕಾರ್ತಿ ಚಿದಂಬರಂ ವಿರುದ್ಧದ ಐಎನ್ಎಕ್ಸ್ ಮೀಡಿಯಾ ಭಷ್ಟಾಚಾರ ಪ್ರಕರಣದ ಚಾರ್ಜ್ ಶೀಟ್ನ್ನು ಜಾರಿ ನಿರ್ದೇಶನಾಲಯ ನ್ಯಾಯಾಲಯಕ್ಕೆ ಸಲ್ಲಿಸಿದೆ.
ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಎದುರು ಜಾರಿ ನಿರ್ದೇಶನಾಲಯ ಪಾಸ್ವರ್ಡ್ ಆಧಾರಿತ ಇ-ಚಾರ್ಜ್ಶೀಟ್ ನ್ನು ಸಲ್ಲಿಕೆ ಮಾಡಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಾರ್ಯಗಳು ಸ್ಥಗಿತಗೊಂಡಿವೆ. ನ್ಯಾಯಾಲಾಯ ಆರಂಭವಾದ ಕೂಡಲೇ ಆರೋಪ ಪಟ್ಟಿಯನ್ನು ದಾಖಲೆಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ. ಆರೋಪ ಪಟ್ಟಿಯಲ್ಲಿ ಪಿ.ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಚಾರ್ಟೆಟ್ ಅಕೌಂಟಂಟ್ ಎಸ್.ಎಸ್. ಭಾಸ್ಕರರಾಮನ್ ಸೇರಿದಂತೆ ಹಲವರ ಹೆಸರುಗಳಿವೆ ಎಂದು ವರದಿಯಾಗಿದೆ.
2019 ಆಗಸ್ಟ್ 21ರಂದು ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಿ.ಚಿದಂಬರಂ ಸಿಬಿಐನಿಂದ ಬಂಧನಕ್ಕೊಳಕ್ಕಾಗಿದ್ದರು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಕ್ಟೋಬರ್ 16ರಂದು ಚಿದಂಬರಂ ಅವರನ್ನ ಬಂಧಿಸಿತ್ತು. ಸುಪ್ರೀಂಕೋರ್ಟ್ 2019 ಅಕ್ಟೋಬರ್ 22ರಂದು ಸಿಬಿಐ ಸಲ್ಲಿಸಿದ್ದ ಪ್ರಕರಣದಲ್ಲಿ ಜಾಮೀನು ನೀಡಿತ್ತು. ಡಿಸೆಂಬರ್ 4ರಂದು ಇಡಿ ಪ್ರಕರಣದಲ್ಲಿ ಜಾಮೀನು ಪಡೆದು ಪಿ.ಚಿದಂಬರಂ ಹೊರ ಬಂದಿದ್ದಾರೆ.