– ಬಿಜೆಪಿಗರು ಸ್ವತಂತ್ರಕ್ಕೆ ಯಾವುದೇ ತ್ಯಾಗ ಮಾಡಿಲ್ಲ
ಬೆಂಗಳೂರು: ನಾನು ಸ್ವಾತಂತ್ರ್ಯ ಬರೋಕೆ ಮುಂಚೆ ಹುಟ್ಟಿದ್ದೇನೆ. ಸ್ವತಂತ್ರ್ಯ ಬಂದ ಮೇಲೆ ಮೋದಿ ಹುಟ್ಟಿದ್ದು, ನಾನು ಮೋದಿಗಿಂತ ಸೀನಿಯರ್ ಎಂದು ಕಾಂಗ್ರೆಸ್ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯ ಚಳುವಳಿ ದಿನಾವರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಗೆ 60 ವರ್ಷ ಅಧಿಕಾರ ಕೊಟ್ಟಿದ್ದೀರಾ? ನಮಗೆ ಅರವತ್ತು ತಿಂಗಳು ಕೊಡಿ ಅಂತ ಮೋದಿ ಹೇಳಿದ್ರು, ಏಳು ವರ್ಷದಲ್ಲಿ ಏನಾದ್ರು ಬದಲಾವಣೆ ಆಗಿದೆಯಾ? ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಜಿಡಿಪಿ ಮೈನಸ್ ಆಗಿದೆ. ಇದು ಮೋದಿಯವರ ಸಾಧನೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಸಾಮಾನ್ಯ ಜನರ ಲಿವಿಂಗ್ ಕಾಸ್ಟ್ ಹೆಚ್ಚಾಗಿದೆ. ಸಾಮನ್ಯ ಜನರು ಹೇಗೆ ಬದುಕುತ್ತಾರೆ? ಉದ್ಯೋಗ ಕಳೆದುಕೊಂಡಿದ್ದರೆ, ಏಳು ವರ್ಷ ಬರೀ ಸುಳ್ಳು ಮಾತ್ರ ಹೇಳಿದ್ದು, ಮೋದಿ ಬಿಜೆಪಿಯವರಷ್ಟು ಸುಳ್ಳುಗಾಗರು ಇಲ್ಲ. ಬಿಜೆಪಿಗರು ಸ್ವತಂತ್ರಕ್ಕೆ ಯಾವುದೇ ತ್ಯಾಗ ಮಾಡಿಲ್ಲ, ಕಾಂಗ್ರೆಸ್ ಮಾತ್ರ ಸ್ವಾತಂತ್ರಕ್ಕೆ ತ್ಯಾಗ ಮಾಡಿದ್ದು, ವಲಸೆ ಹೋದರಲ್ಲ ಅವರೆಲ್ಲ ನಿಜವಾದ ಕಾಂಗ್ರೆಸ್ಸಿಗರಲ್ಲ ಪಕ್ಷ ನಿಷ್ಠೆ ಇಲ್ಲದವರು ಈಗಲೂ ಇದ್ದಾರೆ ಅವರ ಹೆಸರು ಹೇಳುವುದು ಬೇಡ ಎಂದಿದ್ದಾರೆ. ಇದನ್ನೂ ಓದಿ: ಓರ್ವ ವಿದ್ಯಾರ್ಥಿನಿ ಬಿಟ್ಟು ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪಾಸ್
ಯಡಿಯೂರಪ್ಪ ಒಬ್ಬ ಭ್ರಷ್ಟ ಮುಖ್ಯಮಂತ್ರಿ. ಇವಾಗ ಮತ್ತೊಬ್ಬ ಸಿಎಂ ಬಂದಿದ್ದಾರೆ. ಯಡಿಯೂರಪ್ಪನವರ ರಬ್ಬರ್ ಸ್ಟಾಂಪ್. ಅವರಿಂದ ಏನಾದ್ರು ನೀರಿಕ್ಷೆ ಮಾಡಲು ಸಾಧ್ಯವಿಲ್ಲ, ಹೀಗಾಗಿ ಕಾಲ ಕೂಡಿ ಬಂದಿದೆ ಮತ್ತೆ ಹೋರಾಟ ಮಾಡೋಣ, ಅಧಿಕಾರಕ್ಕೆ ಬರೋಣ, ಸ್ವತಂತ್ರವಾಗಿ ಅಧಿಕಾರಕ್ಕೆ ಬರೋಣ. ಕ್ವಿಟ್ ಚಳುವಳಿ ನಮಗೆ ಮಾದರಿಯಾಗಲಿ ಎಂದು ಯಡಿಯೂರಪ್ಪ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಬಿಜೆಪಿಯವರು ಬದಲಾವಣೆ ಮಾಡುತ್ತೇವೆ ಎಂದಿದ್ದರು. ಈಗ ಅಧಿಕಾರಕ್ಕೆ ಬಂದ ಮೇಲೆ ಬದಲಾವಣೆ ಮಾಡಿದ್ದಾರೆ. ಆದರೆ ಅಭಿವೃದ್ಧಿಯನ್ನಲ್ಲ. 28% ಜನ ಬಡತನದ ರೇಖೆಗಿಂತ ಕೆಳಗೆ ಹೋಗಿದ್ದಾರೆ. ನಿರುದ್ಯೋಗ ಯದ್ವಾತದ್ವಾ ಹೆಚ್ಚಾಗಿದೆ. ಇದು ದೇಶಕ್ಕೆ ಮೋದಿಯವರ ಕೊಡುಗೆಯಾಗಿದೆ. ದೇಶದ ಜನರ ಬದುಕುವ ಪರಿಸ್ಥಿತಿ ಶೋಚನೀಯವಾಗಿದೆ. ಅಷ್ಟು ಕೆಟ್ಟ ಪರಿಸ್ಥಿತಿಯನ್ನ ಇವರು ತಂದಿಟ್ಟಿದ್ದಾರೆ. ಸಾಮಾನ್ಯ ಜನ ಬದುಕೋಕೆ ಕಷ್ಟವಾಗಿದೆ. 7 ವರ್ಷದ ಸಾಧನೆ ಸುಳ್ಳು ಹೇಳಿದ್ದು ಬಿಟ್ಟರೆ ಬೇರೇನಿಲ್ಲ. ಸ್ವಾತಂತ್ರ್ಯ ನಂತರ ಇವರಷ್ಟು ಸುಳ್ಳು ಯಾರು ಹೇಳಿಲ್ಲ ಎಂದಿದ್ದಾರೆ.
ಬಿಜೆಪಿಯವರ ತ್ಯಾಗ ಬಲಿದಾನ ಏನೇನೂ ಇಲ್ಲ. ಸಾರ್ವರ್ಕರ್ ಬಗ್ಗೆ ಬಹಳ ಮಾತನಾಡ್ತಾರೆ. ಕಾಂಗ್ರೆಸ್ ಸಿದ್ಧಾಂತ ಅಂದರೆ ತ್ಯಾಗ ಬಲಿದಾನ ಆನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಅವರು ಯಾರು ಸಮಾಜ ಪರಿವರ್ತನೆ ಮಾಡುವವರಲ್ಲ. ಅವರ ನಂಬಿಕೆ ಚಾತುರ್ವರ್ಣ ವ್ಯವಸ್ಥೆ. ಮೇಲು, ಕೀಳಿನ ಬಗ್ಗೆ ಹೆಚ್ಚು ನಂಬಿಕೆ ಇಟ್ಟವರು. ಟಿಪ್ಪು ಕಾಲದಲ್ಲಿ ಹಣಕಾಸು ಮಂತ್ರಿಯಾಗಿದ್ದವರು ಯಾರು? ಕೃಷ್ಣ ಸ್ವಾಮಿ ಅರ್ಥ ಮಂತ್ರಿಯಾಗಿದ್ದರು. ದಿವಾನರಾಗಿದ್ದವರು ಯಾರು ಬ್ರಾಹ್ಮಣರೇ, ಈಗ ದೇಶಭಕ್ತಿ ಬಗ್ಗೆ ಪಾಠ ಹೇಳಿಕೊಡ್ತಾರೆ. ಟಿಪ್ಪು ಜಯಂತಿ ಮಾಡಿದ್ದಕ್ಕೆ ನನ್ನ ವಿರುದ್ಧ ತಿರುಗಿಬಿದ್ದಿದ್ದರು. ಹಿಂದೂ ಧರ್ಮದ ವಿರೋಧಿ ಅನ್ನೋ ರೀತಿ ತಿರುಗಿ ಬಿದ್ದರು. ಟಿಪ್ಪು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆಂಗ್ಲೋ ಮೈಸೂರು ಯುದ್ಧ ಮಾಡಿದವರು. ದಿವಾನ್ ಪೂರ್ಣಯ್ಯನ ಮೇಲೆ ಇವರಿಗೆ ಕೋಪವಿಲ್ಲ. ಇವರಿಗೆ ಕೋಪ ಇದ್ದಿದ್ದು ಟಿಪ್ಪು ಮೇಲೆ, ಇದಕ್ಕಿಂತ ನೀಚ ಮನಸ್ಥಿತಿ ಇನ್ನೊಂದು ಇದ್ಯಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.