ಕೋಲಾರ: ತಂದೆ ಇಲ್ಲದ ಕುಟುಂಬದ ಜವಾಬ್ದಾರಿ ಹೊತ್ತಿದ್ದ, ಗ್ರಾಮ ಪಂಚಾಯತಿಯೊಂದರ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಘಟನೆ ಕೋಲಾರದಲ್ಲಿ ನಡೆದಿದ್ದು, ಕಾವ್ಯಾಂಜಲಿ ಮೃತ ಯುವತಿ. ಕಾವ್ಯಾಂಜಲಿ ಕೋಲಾರ ತಾಲೂಕು ಬೆಗ್ಲಿಹೊಸಹಳ್ಳಿ ಗ್ರಾಮಪಂಚಾಯಿತಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಈಕೆ ನಿನ್ನೆ ರಾತ್ರಿ ಇದ್ದಕ್ಕಿದಂತೆ ತನ್ನದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಿನ್ನೆ ಎಂದಿನಂತೆ ಕೆಲಸ ಮುಗಿಸಿಕೊಂಡು ರಾತ್ರಿ ತಡವಾಗಿ ಮನೆಗೆ ಬಂದ ಕಾವ್ಯಾ, ತನ್ನ ತಾಯಿಗೆ ತಿನ್ನೋದಕ್ಕೆ ಏನಾದರೂ ತೆಗೆದುಕೊಂಡು ಬರುವಂತೆ ಕೇಳಿದ್ದಾಳೆ. ತಾಯಿ ಇಷ್ಟೊತ್ತಿಗೆ ಏನು ಸಿಗುವುದಿಲ್ಲ ಎಂದು ಹೇಳಿದರೂ ಕೇಳದೇ, ಏನಾದರೂ ಬೇಕೆ,ಬೇಕು ಎಂದು ಹಠ ಮಾಡಿದ್ದಾರೆ.
ಆಗ ತಾಯಿ ಪುಷ್ಟಲತಾ ಬಜ್ಜಿ ಬೊಂಡ ಸಿಗಬಹುದು ತೆಗೆದುಕೊಂಡು ಬರುತ್ತೀನಿ ಎಂದು ಮನೆಯಿಂದ ಹೊರಹೋಗಿದ್ದಾರೆ. ವಾಪಸ್ಸು ಬರುವಷ್ಟರಲ್ಲಿ ಮನೆಯ ರೂಮಿನಲ್ಲಿ ಕಾವ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆಗೆ ಬಂದ ತಾಯಿ ಮನೆಯ ಬಾಗಿಲು ತೆರೆಯದ್ದನ್ನು ಕಂಡು ಬೇರೊಂದು ಕೀ ಬಳಸಿ ಮನೆಯ ಬಾಗಿಲು ತೆಗೆದು ನೋಡಿದಾಗ ಕಾವ್ಯ ಸಾವನ್ನಪಿರುವುದನ್ನು ನೋಡಿದ್ದಾರೆ. ಇನ್ನು ಜೀವ ಇದೆ ಎಂದು ತಕ್ಷಣ ಆಸ್ಪತ್ರೆಗೆ ಸೇರಿಸಿದರೂ ಜೀವ ಉಳಿಯಲಿಲ್ಲ. ಕಾವ್ಯಾಳಿಗೆ ತಂದೆ, ತಾಯಿ, ಅಕ್ಕ, ತಂಗಿ, ಸ್ನೇಹಿತೆ ಎಲ್ಲವೂ ತಾಯಿನೇ ಆಗಿದ್ದರೂ ಅವರ ಬಳಿಯೂ ಕಾವ್ಯ ಏನು ಹೇಳಿಕೊಂಡಿಲ್ಲ. ಹಾಗಾಗಿ ಆತ್ಮಹತ್ಯೆಗೆ ಕಾರಣ ಏನು ಎನ್ನುವುದು ಸದ್ಯ ತಿಳಿದು ಬಂದಿಲ್ಲ.
ಈ ಕುಟುಂಬದಲ್ಲಿ ಇದೇ ಮೊದಲ ಆತ್ಮಹತ್ಯೆಯಲ್ಲ, ಈ ಹಿಂದೆ ಕೆಲವು ಹಣಕಾಸಿನ ತೊಂದರೆಯಿಂದ ಕಾವ್ಯಾಳ ಅಕ್ಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ಎರಡು ವರ್ಷಗಳ ಹಿಂದೆ ಕಾವ್ಯಾಳ ತಂದೆ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗ ಮನೆಗೆ ಆಧಾರ ಸ್ಥಂಬವಾಗಿದ್ದ ಕಾವ್ಯಾ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ಎರಡು ವರ್ಷಗಳ ಹಿಂದೆ ಗ್ರಾಮ ಪಂಚಾಯಿತಿ ಪಿಡಿಓ ಆಗಿದ್ದ, ಇವರ ತಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ನಂತರ ಅನುಕಂಪದ ಆಧಾರದಲ್ಲಿ ತಂದೆ ಕೆಲಸವನ್ನು ಕಾವ್ಯಗೆ ನೀಡಲಾಗಿತ್ತು. ಸದ್ಯ ಈ ಕುಟುಂಬದಲ್ಲಿ ಬೇರೆ ಯಾರು ಇರಲಿಲ್ಲ. ತಾಯಿ ಮಗಳು ಇಬ್ಬರೇ ನನಗೆ ನೀನು ನಿನಗೆ ನಾನು ಎನ್ನುವಂತೆ ಜೀವನ ನಡೆಸುತ್ತಿದ್ದರು.
ಈ ಕುಟುಂಬ ಕೂಡಾ ಕಾವ್ಯಾಳ ಮೇಲೆ ಅವಲಂಬಿತವಾಗಿತ್ತು, ಆದರೆ ಇದ್ದಕ್ಕಿದಂತೆ ಕಾವ್ಯಾ ಹೀಗೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇನ್ನು ಕೆಲಸ ಮಾಡುತ್ತಿದ್ದ ಬೆಗ್ಲಿ ಹೊಸಹಳ್ಳಿ ಪಂಚಾಯಿತಿಯಲ್ಲಿ ಎಲ್ಲರೊಟ್ಟಿಗೆ ಒಳ್ಳೆಯ ಪ್ರೀತಿ, ವಿಶ್ವಾಸ ಗಳಿಸಿದ್ದ ಕಾವ್ಯಾಳಿಗೆ ಕೆಲಸದಲ್ಲೂ ಯಾವುದೇ ಒತ್ತಡ ಇರಲಿಲ್ಲ. ಹಾಗಾಗಿ ಕಾವ್ಯಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರಿಗೂ ಕಾವ್ಯಾಳ ಆತ್ಮಹತ್ಯೆ ಆಘಾತ ಉಂಟುಮಾಡಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾವ್ಯಾ ಆತ್ಮಹತ್ಯೆಗೂ ಮುನ್ನ ತನ್ನ ಫೋನ್ ಒಡೆದು ಹಾಕಿದ್ದಾಳೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಸರಣಿ ಆತ್ಮಹತ್ಯೆಯಿಂದ ನೊಂದು ಇತ್ತೀಚೆಗೆ ನೆಮ್ಮದಿಯಾಗಿದ್ದ ಸಂಸಾರದಲ್ಲಿ ಉಳಿದ ತಾಯಿಗೆ ಈಗ ಮತ್ತೊಂದು ಆತ್ಮಹತ್ಯೆ ಆಘಾತವನ್ನುಂಟು ಮಾಡಿರುವುದಂತೂ ಸುಳ್ಳಲ್ಲ. ಇದನ್ನೂ ಓದಿ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಗೆ ವ್ಯಕ್ತಿ ಬಲಿ – ಸಂಬಂಧಿಕರಿಂದ ಆರೋಪ