ನವದೆಹಲಿ: ಭಾರತ ಭೀಕರ ಆರ್ಥಿಕ ಸಂಕಷ್ಟದಲ್ಲಿದೆ ಮಾರಕ ರೋಗದ ಭೀತಿಯಲ್ಲಿದೆ ಇದರ ಜೊತೆಗೆ ಭಾರತ ಚೀನಾ ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ಶುರುವಾಗಿದ್ದು ಇದಕ್ಕೆಲ್ಲ ಕಾರಣ ಮೋದಿ ಸರ್ಕಾರ ಅಧಿಕಾರದ ದುರುಪಯೋಗ, ಆಡಳಿತದ ತಪ್ಪು ನೀತಿಗಳು ಕಾರಣ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಕಷ್ಟದ ಕಾಲದಲ್ಲಿ ಜನರ ಕೈಗೆ ಹಣ ನೀಡಬೇಕು. ಸಣ್ಣ ಮಧ್ಯಮ ಉದ್ದಿಮೆಗಳನ್ನು ಬೆಳೆಸಬೇಕಿತ್ತು. ಬೇಡಿಕೆ ಹೆಚ್ಚಿಸುವ ಪ್ರಯತ್ನ ಸರ್ಕಾರ ಮಾಡಬೇಕಿತ್ತು. ಆದರೆ ಸರ್ಕಾರ ಟೊಳ್ಳಾದ ಆರ್ಥಿಕ ಪ್ಯಾಕೇಜ್ ಘೋಷಿಸಿ ಎಲ್ಲವನ್ನು ನಿರಾಸೆ ಮಾಡಿದೆ ಎಂದ ದೂರಿದ್ದಾರೆ.
- Advertisement 2
- Advertisement 3
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಸಂದರ್ಭದಲ್ಲಿ ದೇಶದಲ್ಲಿ ಸತತ 17 ದಿನಗಳಿಂದ ಇಂಧನ ಬೆಲೆ ಏರಿಕೆಯಾಗಿದೆ ಇದು ಆರ್ಥಿಕ ಸಂಕಷ್ಟದಲ್ಲಿರುವ ಜನರ ಗಾಯಾದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
- Advertisement 4
ಕೇಂದ್ರ ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ. ಈವರೆಗೂ ರಾಜ್ಯ ಸರ್ಕಾರಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿಲ್ಲ. ಜನರನ್ನು ರೋಗದ ಜೊತೆ ಬಿಟ್ಟು ಸ್ವಯಂ ರಕ್ಷಿಸಿಕೊಳ್ಳಲು ಹೇಳಿದೆ ಇದು ತಪ್ಪು ನಿರ್ವಹಣೆ ಮತ್ತು ವಿನಾಶಕಾರಿ ನಿರ್ಧಾರ. ಇದರಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಎದ್ದು ಕಾಣುತ್ತಿದೆ ಎಂದ ಸೋನಿಯ ಗಾಂಧಿ, ಚೀನಾದೊಂದಿಗೆ ಗಡಿಯಲ್ಲಿ ಬಿಕ್ಕಟ್ಟು ಆರಂಭವಾಗಿದ್ದು ಇದನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಮತ್ತು ದೇಶದ ಸಮಗ್ರತೆ ಕಾಪಾಡುತ್ತದೆ ಎಂದು ಭಾವಿಸಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಸೋನಿಯಾ ಗಾಂಧಿ ಬಳಿಕ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಟೀಕೆಗಳನ್ನು ಬೆಂಬಲಿಸುತ್ತೇನೆ ಎಂದರು. ಕೊರೊನಾ ನಿಯಂತ್ರಿಸಲು ನಿರಂತರ ಶ್ರಮ ಮತ್ತು ಧೈರ್ಯ ಬೇಕು, ಗಡಿ ಬಿಕ್ಕಟ್ಟು ನಿಭಾಯಿಸದಿದ್ದರೆ ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕಾರಣಿ ಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೆವಾಲ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಸರ್ಕಾರದ ಆಡಳಿತ ವೈಫಲ್ಯ ವಿರುದ್ಧ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು.