ಕಲಬುರಗಿ: ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಸಿಇಓ ವಿರುದ್ಧ ಒಟ್ಟಾಗಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಿಇಓ ಹೆಬ್ಸಿಬಾರಾಣಿ ಕೋರ್ಲಪಾಟಿ ಮಧ್ಯೆ ಮುಸುಕಿನ ಗುದ್ದಾಟ ಮುಗಿಯೋ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ಬಾರಿ 11 ನೇ ಜಿಲ್ಲಾ ಪಂಚಾಯತ್ ಸಭೆಯನ್ನ ಖುದ್ದು ಸಿಇಓ ಅವರೇ ಕರೆದು, ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೇ ಸಭೆಗೆ ಗೈರಾಗಿ ವಿದೇಶ ಪ್ರವಾಸ ಕೈಗೊಂಡಿದ್ದರು. ಆದರೆ ಇಂದು 12 ನೇ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಪಕ್ಷಬೇಧ ಮರೆತು ಸದಸ್ಯರೆಲ್ಲರು ಸಿಇಓ ವಿರುದ್ಧ ಮುಗಿಬಿದ್ದಿದ್ದಾರೆ.
ಅರಳಗುಂಡಗಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ರೇವಣಸಿದ್ದಪ್ಪ ಸಂಕಾಲೆ ತಾಳ್ಮೆ ಕಳೆದುಕೊಂಡು ಸಿಇಓ ಹೆಬ್ಸಿಬಾರಾಣಿ ಕೋರ್ಲಪಾಟಿರನ್ನ ಏಕವಚನದಲ್ಲಿ ಕ್ಲಾಸ್ ತೆಗೆದುಕೊಂಡರು. ಸದಸ್ಯರಿಗೆ ಹಾಗೂ ಸಭೆಗೆ ಗೌರವ ಕೊಡಬೇಕು ಅನ್ನೊದು ನಿನಗೆ ಗೊತ್ತಿಲ್ವ, ಇಷ್ಟು ದಿನ ಏನಾಗಿತ್ತು, ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾಕೆ ನೀನು ಕ್ರಮ ತೆಗೆದುಕೊಳ್ಳುತ್ತಿಲ್ಲ, ಮಾನ್ಯ ಅಧ್ಯಕ್ಷರೆ ನೀವು ಸಿಇಓ ಮಾತಿಗೆ ಮರಳಾಗಬೇಡಿ ಎಂದು ಗುಡುಗಿದರು.
ಅಲ್ಲದೇ ಇತರ ಸದಸ್ಯರು ಕೂಡ ಸಿಇಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ, ನೀವು ಇಲ್ಲಿಂದ ಹೊರಟುಹೋಗಿ ಅಂತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸಭೆಗೂ ಮುನ್ನ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಿಗೆ ಸಭೆ ನಡೆಸಿದ್ದರು. ಸಭೆಯ ಬಗ್ಗೆ ಹಾಗೂ ಸಿಇಓ ವಿರುದ್ಧ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚಿಸದೇ, ಕೇವಲ ಸಿಇಓ ವಿರುದ್ದ ತಮ್ಮ ಆಕ್ರೋಶವನ್ನ ಹೊರಹಾಕಿದ್ದು, ಅಂತಿಮವಾಗಿ ಯಾರ ಕೈ ಮೇಲಾಗುತ್ತೆ ಅನ್ನೊದು ತೀವ್ರ ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ.