ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ಲಾಸ್ಟಿಕ್ ಬಳಕೆ ಜೊತೆಗೆ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತಿದೆ. ಜನರನ್ನು ಎಷ್ಟೇ ಜಾಗೃತಗೊಳಿಸಿದರೂ ಹೆಚ್ಚು ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಹೆಮ್ಮೆಯ ಸಂಸ್ಥೆಯೊಂದು ಸ್ವದೇಶಿ ಮೇಳದಲ್ಲಿ ಝೀರೋ ವೇಸ್ಟೇಜ್ ಕ್ಯಾಂಪೇನ್ ಮಾಡಿದೆ.
ವಿವಿಧ ಯೋಜನೆಗಳಲ್ಲಿ ಶೂನ್ಯ ತ್ಯಾಜ್ಯ ಹೇಗೆ ಅನ್ನುವುದನ್ನು ಅರಿವು ಮೂಡಿಸುತ್ತಿದೆ. ಅನ್ನ, ಅಕ್ಷರ, ಆರೋಗ್ಯ, ಘೋಷವಾಕ್ಯದೊಂದಿಗೆ ಆರಂಭವಾದ ಅದಮ್ಯ ಚೇತನ ಬೆಂಗಳೂರಿನ ಹೆಮ್ಮೆ. ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಾ ಬಂದಿದೆ. ಅದರಲ್ಲೂ ಶೂನ್ಯ ತ್ಯಾಜ್ಯ ಅಭಿಯಾನ ಕೂಡ ಒಂದು. ಝೀರೋ ವೇಸ್ಟೇಜ್ನಿಂದ ಪ್ಲಾಸ್ಟಿಕ್ ಮುಕ್ತ ಮತ್ತು ತ್ಯಾಜ್ಯ ಮುಕ್ತ ಮಾಡಿ ಅಂತಾ ಜಾಗೃತಗೊಳಿಸುತ್ತಿದೆ. ಬೆಂಗಳೂರಿನ ಜಯನಗರದಲ್ಲಿ ನಡೆದ ಸ್ವದೇಶಿ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆ ಝೀರೋ ವೇಸ್ಟೇಜ್ ಕ್ಯಾಂಪೇನ್ ಮಾಡಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಿದೆ. ಇದನ್ನೂ ಓದಿ: ಯಾರು ಸತ್ತರೂ ಹೆಣದ ಮೇಲೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ: ತಂಗಡಗಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸ್ವದೇಶಿ ಮೇಳ ನಡೆಯುತ್ತಾ ಇದೆ. ಈ ಮೇಳದ ಸಂಯೋಜಕರು ಶ್ರೀಮತಿ ತೇಜಸ್ವಿನಿ ಅನಂತ್ ಕುಮಾರ್. ಈ ಮೇಳದಲ್ಲಿ ಅದಮ್ಯ ಚೇತನ ಸಂಸ್ಥೆಯವರು ಕೂಡ ಸ್ಟಾಲ್ ಹಾಕಿದ್ದು, ಮೂರು ಯೋಜನೆಗಳನ್ನು ಅಳವಡಿಸಿಕೊಂಡು ಝೀರೋ ವೇಸ್ಟೇಜ್ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಅದರಲ್ಲಿ ಮೊದಲನೇ ಯೋಜನೆ ಮೇಳಕ್ಕೆ ಬಂದ ಜನ ಪ್ಲಾಸ್ಟಿಕ್ ಬಳಸಬಾರದು ಅಂತಾ ಸೀರೆಯಲ್ಲಿ ಬ್ಯಾಗ್ ಮಾಡಿ. ಸೀರೆ ಬ್ಯಾಗ್ಗಳನ್ನು ವಿತರಿಸಿದ್ದಾರೆ. ಜೊತೆಗೆ ಸೀರೆ ಇದ್ದರೆ ಅದಮ್ಯ ಚೇತನಕ್ಕೆ ತಂದುಕೊಟ್ಟರೆ ಬ್ಯಾಗ್ ಮಾಡಿ ವಿತರಣೆ ಮಾಡುತ್ತಾರಂತೆ. ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು ಅಂತಾರೆ.
ಅದಮ್ಯ ಚೇತನದ ಎರಡನೇ ಯೋಜನೆಯಲ್ಲಿ ಊಟ ಮಾಡುವ ಸ್ಥಳದಲ್ಲಿ ಪ್ಲಾಸ್ಟಿಕ್ ಲೋಟ ಮತ್ತು ಪ್ಲೇಟ್ ಬಳಸಬಾರದು ಅಂತಾ ಪ್ಲೇಟ್ ಬ್ಯಾಂಕ್ನಿಂದ ಪ್ರತಿ ಸ್ಟಾಲ್ಗೆ ಲೋಟ ವಿತರಣೆ ಮಾಡಿದ್ದಾರೆ. ಜೊತೆಗೆ ಊಟ ಮಾಡುವ ಸ್ಥಳದಲ್ಲಿ ಸ್ಟೀಲ್ ಲೋಟ ಮತ್ತು ತಟ್ಟೆಗಳನ್ನು ವ್ಯವಸ್ಥೆ ಮಾಡಿದ್ದಾರೆ. ಸ್ಥಳದಲ್ಲೇ ಡಿಶ್ ವಾಶರ್ ವ್ಯವಸ್ಥೆ ಕೂಡ ಇದ್ದು ಕ್ಲೀನ್ ಮಾಡಿ. ಮತ್ತೆ ಸ್ಟೀಲ್ ತಟ್ಟೆ ಬಳಸಬಹುದು. ಶುಭ ಸಮಾರಂಭ ಕಾರ್ಯಕ್ರಮಗಳಿಗೆ ಅದಮ್ಯ ಚೇತನ ಸಂಸ್ಥೆ ಪ್ಲೇಟ್ ಬ್ಯಾಂಕ್ನಿಂದ ಸ್ಟೀಲ್ ಲೋಟ, ತಟ್ಟೆ ಮತ್ತು ಪಾತ್ರೆಗಳನ್ನ ಒದಗಿಸುತ್ತದೆ. ಪ್ಲಾಸ್ಟಿಕ್ ಪೇಪರ್ ಲೋಟ ಮತ್ತು ಬಾಳೆ ಎಲೆ ಆದರೆ ತ್ಯಾಜ್ಯ ಹೆಚ್ಚಾಗುತ್ತೆ. ಮತ್ತೆ ಪ್ಲಾಸ್ಟಿಕ್ ಬಳಕೆಯಿಂದ ಖಾಯಿಲೆ ಅನಾರೋಗ್ಯಕ್ಕೆ ಕಾರಣ ಆಗುತ್ತೆ. ಇದರ ಬದಲು ಅದಮ್ಯ ಚೇತನ ಸಂಸ್ಥೆ ಪ್ಲೇಟ್ ಬ್ಯಾಂಕ್ನಿಂದ ಪಾತ್ರೆ ತೆಗೆದುಕೊಂಡು ಶುಭ ಸಮಾರಂಭ ಮಾಡಬಹುದು. ಯಾವುದೇ ಶುಲ್ಕವಿಲ್ಲದೇ ಪಾತ್ರೆ ವಿತರಣೆ ಮಾಡುತ್ತಾರೆ. ಶುಭ ಸಮಾರಂಭ ಮುಗಿದ ಬಳಿಕ ಪ್ಲೇಟ್ ಬ್ಯಾಂಕ್ನಿಂದ ಪಡೆದ ಪಾತ್ರೆಗಳನ್ನು ವಾಪಸ್ ತಿರುಗಿಸಬಹುದು ಇದರಿಂದ ಶೂನ್ಯ ತ್ಯಾಜ್ಯ ಮಾಡಬಹುದು. ಇದನ್ನೂ ಓದಿ: ಕಾಂಗ್ರೆಸ್ನವರು ಕೇಸರಿ ಶಲ್ಯ ಧರಿಸಿರೋದು ಒಳ್ಳೆಯ ಸಂಕೇತ: ಬೊಮ್ಮಾಯಿ
ಮನೆಗಳಲ್ಲಿ ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್ಗಳನ್ನು ಬಿಸಾಡೋದ್ರಿಂದ ಸಾಕಷ್ಟು ಸಮಸ್ಯೆ ಆಗುತ್ತೆ. ಹಾಗಾಗಿ ವೇಸ್ಟೇಜ್ ಆಗಿರೋ ಪ್ಲಾಸ್ಟಿಕ್ ಡಬ್ಬಿಯಲ್ಲೇ ಸಂಗ್ರಹಣೆ ಮಾಡಿ ರೀಸೈಕಲ್ ಮಾಡಿ. ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರ್ಗಳಿಂದ ಪ್ರಾಣಿಗಳ ಬಾಯಿಗೆ ಸಿಗಬಹುದು ಹಾಗೂ ನೀರಿನ ಕೊಳವೆಗಳಿಗೆ ಸಿಕ್ಕಿ ಸಮಸ್ಯೆ ಆಗುವ ಸಾಧ್ಯತೆ ಇದೆ. ಹಾಗಾಗಿ ಎಚ್ಚೆತ್ತುಕೊಳ್ಳಬೇಕು. ಚಿಕ್ಕ ಚಿಕ್ಕ ಮಕ್ಕಳನ್ನೇ ಸ್ವದೇಶಿ ಮೇಳಕ್ಕೆ ಕರೆಸಿ ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಒಟ್ಟಾರೆ ಅದಮ್ಯ ಚೇತನ ಸಂಸ್ಥೆ ಝೀರೋ ವೇಸ್ಟೇಜ್ ಬಗ್ಗೆ ಜನರನ್ನು ಜಾಗೃತಗೊಳಿಸುತ್ತಾ ಇದೆ. ಜನ ಜಾಗೃತರಾಗಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಝೀರೋ ವೇಸ್ಟೇಜ್ ಅನ್ನು ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳುತ್ತಾರೆಯೇ ಕಾದು ನೋಡಬೇಕಿದೆ.