ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಜಮೀರ್ ಅಹ್ಮದ್ ಕರಾವಳಿಗೆ ಬಂದಾಗಲೆಲ್ಲ ಏನಾದ್ರು ಒಂದು ಕಾರಣಕ್ಕೆ ಮಿಂಚುತ್ತಿದ್ದಾರೆ.
ಗುರುವಾರ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ಜಮೀರ್, ಮೀನು ಊಟಕ್ಕಾಗಿ ಮಂಗಳೂರಿನ ಕಂಕನಾಡಿಯ ಲೋವರ್ ಬೆಂದೂರುವೆಲ್ ನಲ್ಲಿರುವ ಫಿಶ್ ಮಾರ್ಕೆಟ್ ಎನ್ನುವ ಸೀ ಫುಡ್ ರೆಸ್ಟೋರೆಂಟಿಗೆ ತೆರಳಿದ್ದರು. ಅಂಜಲ್, ಮಾಂಜಿ, ಸಿಗಡಿ ಹೀಗೆ ಕರಾವಳಿಯ ವಿವಿಧ ಮಾದರಿಯ ಮೀನಿನ ಖಾದ್ಯಗಳನ್ನು ಸವಿದ ಸಚಿವರು, ಬಾಣಸಿಗನನ್ನು ಬರ ಹೇಳಿದ್ದಾರೆ.
ರುಚಿ ಕಟ್ಟಾದ ಮೀನಿನ ಖಾದ್ಯಗಳನ್ನು ರೆಡಿ ಮಾಡಿದ್ದ ಉಳ್ಳಾಲದ ಬೋಳಿಯಾರ್ ನಿವಾಸಿ ಹನೀಫ್ರ ಬೆನ್ನು ತಟ್ಟಿ ಅವರಿಗೆ ತನ್ನದೇ ಖರ್ಚಿನಲ್ಲಿ ಪವಿತ್ರ ಮೆಕ್ಕಾ ಯಾತ್ರೆಗೆ ಹೋಗಿ ಬರಲು ವ್ಯವಸ್ಥೆ ಮಾಡಿದ್ದಾರೆ. ಇದನ್ನು ಕೇಳಿದ ಬಡ ಬಾಣಸಿಗನಿಗೆ ಆಶ್ಚರ್ಯ, ಆನಂದ ಎರಡೂ ಉಂಟಾಗಿತ್ತು. ಆ ಬಳಿಕ ಸಚಿವರು ಹೊರಡುವ ಮುನ್ನ ಹೊಟೇಲಿನ ಎಲ್ಲ ಸಿಬ್ಬಂದಿಗಳನ್ನು ಕರೆದು ಒಟ್ಟು 25 ಸಾವಿರ ರೂ. ಟಿಪ್ಸ್ ಕೊಟ್ಟಿದ್ದಾರೆ.
ಶ್ರೀಮಂತಿಕೆ ಹಲವರಲ್ಲಿ ಇರುತ್ತೆ, ಕೈ ಎತ್ತಿ ನೀಡುವ ಜಾಯಮಾನ ಎಲ್ಲರಲ್ಲಿ ಇರುವುದಿಲ್ಲ. ಇಂಥವರ ಪೈಕಿ ಜಮೀರ್ ಅಹ್ಮದ್ ನಡೆ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ಸುಳ್ಯಕ್ಕೆ ಆಗಮಿಸಿದ್ದ ಸಚಿವರು, ಜೋಡುಪಾಲ ದುರಂತದಲ್ಲಿ ಸ್ವಯಂಸೇವಕರಾಗಿ ದುಡಿದವರನ್ನು ಕರೆದು ತಲಾ ಒಂದು ಲಕ್ಷ ರೂ. ನೀಡಿ ಪುಣ್ಯಕ್ಷೇತ್ರ ದರ್ಶನ ಮಾಡುವಂತೆ ಹೇಳಿದ್ದರು. ಅಲ್ಲಿನ ಹಿಂದು ಮತ್ತು ಮುಸ್ಲಿಮ್ ಸ್ವಯಂ ಸೇವಕರಿಗೆ ಇದು ಅಚ್ಚರಿಯ ಕೊಡುಗೆಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv