ಮಡಿಕೇರಿ: ವಿಶೇಷ ಅನ್ನಭಾಗ್ಯ ಯೋಜನೆಯಡಿ ಕೊಡಗು ಪ್ರವಾಹ ಸಂತ್ರಸ್ತರಿಗೆ 50 ಸಾವಿರ ರೂ. ಮೌಲ್ಯದ ಆಹಾರ ಕಿಟ್ ನೀಡಿದ ಬೆನ್ನಲ್ಲೆ ಸಂತ್ರಸ್ತರ ಪೈಕಿ ವಿವಾಹ ನಿಶ್ಚಯವಾಗಿದ್ದ ಇಬ್ಬರು ಯುವತಿಯರಿಗೆ ತಲಾ 50 ಸಾವಿರ ರೂ.ವನ್ನು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ನೀಡಿದ್ದಾರೆ.
ಮಕ್ಕಂದೂರು ಗ್ರಾಮದ ಯುವತಿಯರಾದ ಮಂಜುಳಾ ಹಾಗೂ ರಂಜಿತಾ ಅವರ ವಿವಾಹದ ದಿನಾಂಕ ನಿಗದಿಯಾಗಿತ್ತು. ಒಬ್ಬರ ವಿವಾಹ ಆಗಸ್ಟ್ 26 ಹಾಗೂ ಮತ್ತೊಬ್ಬರ ವಿವಾಹ ಸೆಪ್ಟಂಬರ್ ನಲ್ಲಿ ನಡೆಯಬೇಕಿತ್ತು. ಮಹಾಮಳೆ ಹಾಗೂ ಭೂಕುಸಿತದಿಂದಾಗಿ ಯುವತಿಯರ ಕುಟುಂಬದವರು ಮನೆ, ವಿವಾಹಕ್ಕೆ ಕೂಡಿಟ್ಟ ಚಿನ್ನಾಭರಣ, ನಗದು ಸಾಮಗ್ರಿಗಳನ್ನು ಕಳೆದುಕೊಂಡಿದ್ದರು. ಈಗಾಗಲೇ ಕುಟುಂಬದವರು ಆಹ್ವಾನ ಪತ್ರಿಕೆ ಮುದ್ರಿಸಿ ಬಂಧುಗಳಿಗೆ ಹಂಚಿದ್ದಾರೆ. ಹೀಗಾಗಿ ನಿಶ್ಚಯವಾದ ದಿನದಂದು ಮದುವೆ ಮಾಡಲು ಯುವತಿಯ ಕುಟುಂಬದವರು ತೀರ್ಮಾನಿಸಿದ್ದರು.
ಯುವತಿಯ ವಿವಾಹಕ್ಕೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಜಮೀರ್ ಅಹ್ಮದ್ ತಲಾ 50 ಸಾವಿರ ರೂ. ನೀಡಿದ್ದಾರೆ. ಇತ್ತ ಮಂಜುಳಾ ಹಾಗೂ ರತೀಶ್ ಅವರ ವಿವಾಹವು ಭಾನುವಾರ ನಗರದ ಗಜ್ಜೆ ಸಂಗಪ್ಪ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಇದರಿಂಗಾಗಿ ಮಂಜುಳಾ ಅವರ ಸಂಬಂಧಿಕರು ಓಂಕಾರ ಸದನದಲ್ಲಿದ್ದು, ಚಪ್ಪಾರ ಹಾಕಿ ನಾಳೆ ನಡೆಯುವ ಮದುವೆ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv